ಜಮ್ಮು- ಕಾಶ್ಮೀರ: ನಕಲಿ ಎನ್ಕೌಂಟರ್ನಲ್ಲಿ ಮೂವರು ಕಾರ್ಮಿಕರ ಹತ್ಯೆ ಪ್ರಕರಣ; ಸೇನಾಧಿಕಾರಿಗೆ ಜೀವಾವಧಿ; ಸೇನಾ ನ್ಯಾಯಾಲಯ ಶಿಫಾರಸು
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಕಾಳಗ ನಡೆದಿದೆ ಎಂಬಂತೆ ಬಿಂಬಿಸಿ ಮೂವರು ಕಾಶ್ಮೀರಿ ವ್ಯಕ್ತಿಗಳನ್ನು ಕೊಂದ ಪ್ರಕರಣದಲ್ಲಿ ಸೇನಾ ನ್ಯಾಯಾಲಯವೊಂದು ಸೇನಾಧಿಕಾರಿಯೊಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಶಿಫಾರಸು ಮಾಡಿದೆ.
ಈ ಪ್ರಕರಣದಲ್ಲಿ ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರಗಳ) ಕಾಯ್ದೆಯ ಅಧಿಕಾರಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಸೇನಾ ವಿಚಾರಣೆಯಲ್ಲಿ ಖಚಿತಪಟ್ಟ ಬಳಿಕ, ಅವರನ್ನು ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗಿತ್ತು. ಜೀವಾವಧಿ ಶಿಕ್ಷೆಯ ಶಿಫಾರಸನ್ನು ಸೇನೆಯ ಉನ್ನತ ಅಧಿಕಾರಿಗಳು ಅಂಗೀಕರಿಸಿದರೆ ಶಿಕ್ಷೆ ಜಾರಿಯಾಗುತ್ತದೆ.
2020 ಜುಲೈ 18ರಂದು, ಭಯೋತ್ಪಾದಕರೆಂಬ ಸಂಶಯದಲ್ಲಿ ನಕಲಿ ಗುಂಡಿನ ಕಾಳಗದಲ್ಲಿ ಅಬ್ರಾರ್ ಅಹ್ಮದ್, ಇಮ್ಮಿಯಾಝ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಎಂಬವರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮೃತಪಟ್ಟವರು ಕಾರ್ಮಿಕರು ಎಂಬುದಾಗಿ ಅವರ ಸಂಬಂಧಿಕರು ಹೇಳಿದ್ದರು. 2020 ಆಗಸ್ಟ್ 9ರಂದು ಮೂವರು ವ್ಯಕ್ತಿಗಳ ಕುಟುಂಬಿಕರು ನಾಪತ್ತೆ ದೂರು ನೀಡಿದ್ದರು. ಆ ಬಳಿಕ ಸೇನೆಯು ವಿಷಯದ ಬಗ್ಗೆ ಔಪಚಾರಿಕ ತನಿಖೆ ನಡೆಸಿತು. ತನಿಖೆ ಆರಂಭಗೊಂಡ ಒಂದು ತಿಂಗಳ ಬಳಿಕ ಹೇಳಿಕೆಯೊಂದನ್ನು ನೀಡಿದ ಸೇನೆ, ತನ್ನ ಸಿಬ್ಬಂದಿಯು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡಿರುವುದು “ಮೇಲ್ನೋಟಕ್ಕೆ' ಪತ್ತೆಯಾಗಿದೆ ಎಂದು ಹೇಳಿತ್ತು. ಸಿಬ್ಬಂದಿಯ ವಿರುದ್ಧ ಸೇನಾ ಕಾಯ್ದೆಯನ್ವಯ ಶಿಸ್ತು ಕ್ರಮ ಆರಂಭಿಸಲಾಗಿದೆ ಎಂದು ಅದು ಹೇಳಿತ್ತು. ಪೊಲೀಸರೂ ಈ ಘಟನೆಯ ಬಗ್ಗೆ ತನಿಖೆ ನಡೆಸಿದರು.
ಪ್ರಕರಣದಲ್ಲಿ ಆರೋಪಿ ಸೇನಾಧಿಕಾರಿ ಸಿಂಗ್ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು 2021 ಜನವರಿಯಲ್ಲಿ ತಮ್ಮ ಆರೋಪಪಟ್ಟಿಯಲ್ಲಿ ಹೇಳಿದರು. ಮೃತಪಟ್ಟ ಮೂವರು ಕಾರ್ಮಿಕರಾಗಿದ್ದು ಅವರಿಗೆ ಭಯೋತ್ಪಾದಕರೊಂದಿಗೆ ಯಾವುದೇ ನಂಟು ಇರಲಿಲ್ಲ ಎಂದು ಪೊಲೀಸರು ಹೇಳಿದರು. ಮೃತರಿಂದ ವಶಪಡಿಸಿಕೊಳ್ಳಲಾಯಿತೆನ್ನಲಾದ ಶಸ್ತ್ರಗಳನ್ನು ಘಟನೆ ನಡೆದ ಸ್ಥಳದಲ್ಲಿ ಸೈನಿಕರೇ ಇರಿಸಿದ್ದರು ಎಂಬುದಾಗಿಯೂ ಪೊಲೀಸರು ಹೇಳಿದರು.