ಅಂಕೋಲಾ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ಮಾರಗಪಟ್ಟಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅಂಕೋಲಾ ತಾಲೂಕಿನ ಕೈಗಡಿ ಗ್ರಾಮದಲ್ಲಿ ಶನಿವಾರ ಅನ್ನದಂಗಳದ ಮಾತುಕತೆ ಶೀರ್ಷಿಕೆಯಡಿ ನಡೆದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕೇಂದ್ರದ ಬಜೆಟ್ ನಲ್ಲಿ 1.35 ಸಾವಿರ ಕೋಟಿ ರೂಪಾಯಿ ಕೃಷಿಗೆ ಮೀಸಲಿರುದಲ್ಲದೇ ಈಗಾಗಲೇ 1.57 ಸಾವಿರ ಕೋಟಿ ರೂಪಾಯಿಗಳನ್ನು ಸಹ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ತಲುಪಿಸಲಾಗಿದೆ ಎಂದರು.
ಕೃಷಿ ವಿಮೆ, ಕೃಷಿ ಡಿಪ್ಲೋಮಾ ಕಾಲೇಜು, ಪ್ರಾಣಿಗಳ ಹಾವಳಿ, ಪ್ರಧಾನ ಮಂತ್ರಿ ಯೋಜನೆ ಅರಣ್ಯ ಕಾಯಿದೆ, ಮಾರುಕಟ್ಟೆ ಸೌಕರ್ಯ, ಸಾವಯವ ಕೃಷಿಯಂತಹ 25 ಬೇಡಿಕೆಗಳನ್ನು ಆಲಿಸಿದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ದೇಶದ ಕೃಷಿವು ವಿಭಾಗದ ರಫ್ತುನಲ್ಲಿ ಹಂತ ಹಂತವಾಗಿ ಏರಿಕೆ ಕಾಣುತಿದ್ದು, ಕಳೆದ ವರ್ಷ ಇತಿಹಾಸದಲ್ಲಿಯೇ ಹೆಚ್ಚು ಆಹಾರ ಬೆಳೆ ಹಾಗೂ ತರಕಾರಿಗಳನ್ನು ಬೆಳೆಯಲಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಜಿಡಿಪಿ ಯಲ್ಲಿ 20. 22 ಕೃಷಿಯ ಪಾತ್ರವಿರುವುದು ಶ್ಲಾಘನೀಯ ಎಂದರು.
ರಾಜ್ಯದಲ್ಲಿ ಶೇ. 80 ರಷ್ಟು ರೈತರಿಗೆ 5 ಎಕರೆಗಿಂತ ಕಡಿಮೆ ಭೂಮಿ ಇದೆ. ಅಲ್ಲದೇ ರೈತರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗುತ್ತಿರುವುದರಿಂದ ಕರ್ನಾಟಕದಲ್ಲಿ ಕೃಷಿ ಉತ್ಪನ್ನಗಳ ರಫ್ತು ಕಡಿಮೆಯಾಗಿದೆ. ಕೇಂದ್ರದಲ್ಲಿ 25 ಅಂಶಗಳನ್ನೊಳಗೊಂಡ 1 ಲಕ್ಷ ಕೋಟಿ ಇನ್ಫ್ರಾಸ್ಟ್ರಕ್ಚರ್ ಅನುದಾನ ಇದ್ದು ಯುವ ರೈತರು ಉಪಯೋಗಿಕೊಳ್ಳಬೇಕು, ಅರಣ್ಯ ಕಾಯ್ದೆಯಡಿ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯಸರಕಾರದೊಂದಿಗೆ ಹಾಗೂ ರೈತರ ಮನವಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ರಾಜ್ಯ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಸರ್ಕಾರದ ಸೇವೆ ಅಪಾರವಾಗಿದ್ದು. ಅರಣ್ಯ ಜಮೀನು ಹಕ್ಕು ಪತ್ರಕ್ಕೆ ಸಂಬಂಧಿಸಿದಂತೆ ಫಾರಂ ನಂಬರ್ 11 ರ ಬಗ್ಗೆ ಚರ್ಚಿಸಲಾಗುವುದು. ಜಿಲ್ಲೆಯನ್ನು ಗುಡ್ಡಗಾಡು ಜಿಲ್ಲೆಗಳ ಪಟ್ಟಿಗೆ ಸೇರಿಸಿದರೆ ಅನೇಕ ಸವಲತ್ತುಗಳು ಸಿಗುತ್ತವೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ರೈತ ದಂಪತಿ ಲಕ್ಷ್ಮಿ ಮತ್ತು ಬಾಬು ಕುಂಚ ಸಿದ್ದಿಯವರನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಆ. ಶಿ. ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಸುತ್ತಲಿನ ಗ್ರಾಮಸ್ಥರು ರೈತ ಮುಖಂಡರು ಇದ್ದರು.