ಅಗರ್ತಲ(ತ್ರಿಪುರಾ): ತ್ರಿಪುರಾದಲ್ಲಿ ನಡೆದಿದೆಯೆನ್ನಲಾದ ಚುನಾವಣೋತ್ತರ ಹಿಂಸಾಚಾರದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ರಾಜ್ಯಕ್ಕೆ ತೆರಳಿದ್ದ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಶಾಸಕರನ್ನೊಳಗೊಂಡ ತಂಡದ ಮೇಲೆ ಶುಕ್ರವಾರ ರಾಜ್ಯದ ಸೆಪಹಿಜಲ ಎಂಬಲ್ಲಿ ದಾಳಿ ನಡೆದಿದೆ.
ತಂಡದಲ್ಲಿದ್ದ 8 ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸಹಾಯಕ ಪೊಲೀಸ್ ಮಹಾ ನಿರೀಕ್ಷಕ (ಕಾನೂನು ಮತ್ತು ವ್ಯವಸ್ಥೆ) ಜ್ಯೋತಿಶ್ಚಾನ್ ದಾಸ್ ಚೌಧರಿ ಹೇಳಿದ್ದಾರೆ.
“ಎಡ ಪಕ್ಷಗಳು ಮತ್ತು ಕಾಂಗ್ರೆಸ್ಗೆ ಸೇರಿದ ಸಂಸದರು, ಶಾಸಕರು ಮತ್ತು ಸ್ಥಳೀಯ ನಾಯಕರ ನಿಯೋಗವೊಂದು ಇಂದು ಬಿಶಲ್ಗರ್ನಲ್ಲಿರುವ ನೇಹಲ್ ಚಂದ್ರನಗರ್ಗೆ ಪೂರ್ವಯೋಜಿತವಲ್ಲದ ಭೇಟಿ ನೀಡಿದೆ'' ಎಂದು ಚೌಧರಿ ಹೇಳಿದರು. ಅವರ ಭೇಟಿಯ ವೇಳೆ ಘೋಷಣೆಗಳನ್ನು ಕೂಗಲಾಗಿದೆ ಮತ್ತು ಕೆಲವು ದುಷ್ಕರ್ಮಿಗಳು ಅವರ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಅವರಿಗೆ ಬೆಂಗಾವಲು ಒದಗಿಸಿದ್ದ ಪೊಲೀಸ್ ತಂಡವು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ ನಿಯೋಗದ ಸದಸ್ಯರನ್ನು ರಕ್ಷಿಸಿತು” ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣಾ ಫಲಿತಾಂಶವು ಮಾರ್ಚ್ 2ರಂದು ಘೋಷಣೆಯಾದ ಬಳಿಕ, ಜಿಲ್ಲೆಯಲ್ಲಿ ಹಿಂಸೆ ಸ್ಫೋಟಗೊಂಡಿತ್ತು. ಬಿಶಲ್ಗರ್ ಉಪವಿಭಾಗದ ಗಡಿ ಗ್ರಾಮ ನೇಹಲ್ ಚಂದ್ರನಗರದಲ್ಲಿ ಬುಧವಾರ ರಾತ್ರಿ ಕನಿಷ್ಠ 20 ಅಂಗಡಿಗಳನ್ನು ಸುಡಲಾಗಿದೆ.