ನಳಿನ್ ಕುಮಾರ್ ಕಟೀಲು ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ
ಬೆಂಗಳೂರು: ರಸ್ತೆ, ಮೋರಿ, ಚರಂಡಿ ಅಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಗಾಗಿ ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಕ್ಷ ಬೇಕು ಅನ್ನೋದನ್ನು ತಿಳಿದುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿರುವ ವೀಡಿಯೊ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಇಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅಭಿವೃದ್ಧಿ ಅಥವಾ ಉದ್ಯೋಗದ ಬಗ್ಗೆ ಬಿಜೆಪಿಗೆ ಯಾವಾಗ ಆದ್ಯತೆ ಇತ್ತು? ಕನಿಷ್ಠ ಪಕ್ಷ ಈಗ ತನ್ನ ಆದ್ಯತೆಯನ್ನು ಪ್ರಾಮಾಣಿಕವಾಗಿ ಒಪ್ಪಿದೆ. ಚಿಂತಿಸಬೇಡಿ, ರಾಜ್ಯದ ಜನರು ಬಿಜೆಪಿಗೆ ತಾವು ಏನನ್ನು ಆಯ್ಕೆ ಮಾಡಲಿದ್ದೇವೆ ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಆತ್ಮೀಯ ಕನ್ನಡಿಗರೇ, ಬಿಜೆಪಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಗೆ 'ಅಭಿವೃದ್ಧಿ' ಬೇಕಾಗಿಲ್ಲ. ಬಿಜೆಪಿಗೆ 'ರಸ್ತೆ' ಬೇಡ, ಬಿಜೆಪಿಗೆ ಒಳಚರಂಡಿ ಬೇಕಿಲ್ಲ. ಬಿಜೆಪಿಗೆ ಉದ್ಯೋಗ ಬೇಕಾಗಿಲ್ಲ. ಬಿಜೆಪಿಗೆ ಬೇಕಾಗಿರುವುದು ಲವ್ ಜಿಹಾದ್ ಮಾತ್ರ. ಬಿಜೆಪಿಗೆ ಬಾಗಿಲು ತೋರಿಸುವ ಸಮಯ ಇದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
ಮೋದಿಯವರ 8 ವರ್ಷ, ಬಿ.ಎಸ್. ಯಡಿಯೂರಪ್ಪ ಅವರ 2 ವರ್ಷ, ಬೊಮ್ಮಾಯಿಯವರ 1.5 ವರ್ಷದ ಆಡಳಿತದ ನಂತರವೂ ಅಭಿವೃದ್ಧಿ ವಿಚಾರಗಳ ಬದಲು ಕೋಮುಕಲಹದ ರಾಜಕಾರಣದ ಬಿಜೆಪಿಯ ಗುಪ್ತ ಕಾರ್ಯಸೂಚಿ ನಳಿನ್ನಕುಮಾರ್ ಕಟೀಲು ಅವರ ಬಾಯಲ್ಲಿ ಹೊರಬಂದಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಬಿಜೆಪಿಯು ನಿರ್ಲಜ್ಜ ತನ ಹಾಗೂ ಅನೈತಿಕ ರಾಜಕಾರಣದ ಪರಮಾವಧಿ ತಲುಪಿದೆ. ಬಿಜೆಪಿ ಎಂದೂ ಜನಪರ, ಅಭಿವೃದ್ಧಿಪರ ರಾಜ ಕಾರಣ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ರಸ್ತೆ, ಚರಂಡಿ, ರಸ್ತೆಗುಂಡಿಗಳು ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ. ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ. 54 ಸಾವಿರ ಪಿಎಸೈ ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ, ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ರಾಜ್ಯ ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.