ಚಿಕ್ಕಮಗಳೂರು: ಎಟಿಎಂ ಕಾರ್ಡ್ ಬಳಸಿ ಹಣ ಕದಿಯುತ್ತಿದ್ದ ಆರೋಪಿ ಬಂಧನ
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಉಪವಿಭಾಗದ ಕಡೂರು ಸರ್ಕಲ್ ಪೊಲೀಸರು, ಎಟಿಎಂ ಕಾರ್ಡ್ಗಳನ್ನು ಬಳಸಿ, ಮೋಸದಿಂದ ಹಣ ಲಪಟಾಯಿಸುತ್ತಿದ್ದ ಆರೋಪದ ಮೇಲೆ, ಒಬ್ಬಾತನನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗೊರವಿನಕಲ್ಲು ಗ್ರಾಮದ, 22 ವರ್ಷದ ಶಿವಲಿಂಗ ಬಿನ್ ಗುರುಸ್ವಾಮಿ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನಿಂದ; ಕೃತ್ಯಕ್ಕೆ ಬಳಸಿದ್ದ 6 ಎಟಿಎಂ ಕಾರ್ಡ್ಗಳು, ರೂ. 13000ರೂ. ನಗದು ಹಣ ಮತ್ತು ಕಳ್ಳತನದ ಹಣದಲ್ಲಿ ಖರೀದಿ ಮಾಡಿದ್ದ ಒಂದು ಪಲ್ಸರ್ ಮೋಟಾರ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 24 ರಂದು, ಸಿಂಗಟಗೆರೆಯ ಎಸ್.ಡಿ. ಕೊಪ್ಪಲಿನ ನಿವಾಸಿಯೊಬ್ಬರು, ಎಸ್ಬಿಐ ಬ್ಯಾಂಕ್ನ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋಗಿದ್ದರು. ಆ ಸಮಯದಲ್ಲಿ, ಸಹಾಯ ಮಾಡುವ ನೆಪದಲ್ಲಿ ಬಂದಾತನೊಬ್ಬ, ಪಿನ್ ನಂಬರ್ ನೋಡಿಕೊಂಡು, ದೂರುದಾರನ ಗಮನಕ್ಕೆ ಬಾರದೆ, ಕಾರ್ಡ್ನ್ನು ಬದಲಾಯಿಸಿ ನೀಡಿದ್ದ. ನಂತರ, ಕದ್ದ ಕಾರ್ಡ್ನಿಂದ ರೂ. 18500/- ಹಣವನ್ನು ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಂಚನಹಳ್ಳಿ ಹೋಬಳಿಯ ಉಪ್ಪಿನಹಳ್ಳಿಯ ಮಹಿಳೆಯೊಬ್ಬರು, ಊರಿಗೆ ಹೋಗಲು ಪಂಚನಹಳ್ಳಿ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಕಾಯುತ್ತಿದ್ದಾಗ, ಅವರ ವ್ಯಾನಿಟಿ ಬ್ಯಾಗ್ನಲ್ಲಿ ಇದ್ದ ಎಟಿಎಂ ಕಾರ್ಡ್ ಕಳ್ಳತನವಾಗಿತ್ತು, ಅದನ್ನು ಕದ್ದಿದ್ದ ಆರೋಪಿ, ಕಾರ್ಡ್ನ ಪೌಚ್ನಲ್ಲಿ ಬರೆದಿದ್ದ ಪಿನ್ ನಂಬರ್ ಬಳಸಿ, ದಿನಾಂಕ 21-11-2021ರಂದು, ರೂ. 27500/- ಹಣವನ್ನು ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳ ತನಿಖೆ ನಡೆಸಿರುವ, ಕಡೂರು ಸರ್ಕಲ್ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಂಧನ ಕಾರ್ಯದಲ್ಲಿ ಅಧಿಕಾರಿಗಳಾದ ಕಡೂರು ವೃತ್ತದ ಸಿಪಿಐ ಆದ ಬಿ.ಎಸ್. ಮಂಜುನಾಥ್ ಮತ್ತು ಕಡೂರು ವೃತ್ತ ಠಾಣೆಯ ಪಿಎಸ್ಐ ರವರುಗಳಾದ ಹರೀಶ್ ಆರ್, ಲೀಲಾವತಿ, ಪವಿತ್ರಾ ಹಾಗೂ ಕಡೂರು ವೃತ್ತ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ಬೀರೇಶ, ದೇವರಾಜ್ ಮತ್ತು ಶಿವರಾಜ ರವರುಗಳು ಭಾಗವಹಿಸಿದ್ದು, ಇವರುಗಳ ಉತ್ತಮ ಕಾರ್ಯ ಮಾಡಿದ ಬಗ್ಗೆ ಎಸ್.ಪಿ. ಅಕ್ಷಯ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.