ಚೈತ್ರಾ ವಂಚನೆ ಪ್ರಕರಣ; ನಳಿನ್ ಕುಮಾರ್ ಕಟೀಲುರನ್ನು ತನಿಖೆಗೆ ಒಳಪಡಿಸಿ, ಪ್ರಕರಣ ಸಿಐಡಿಗೆ ವಹಿಸುವಂತೆ ದೂರು
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣದಲ್ಲಿ ಹಣ ನೀಡಿರುವ ವ್ಯಕ್ತಿ ಶಿವಮೂರ್ತಿ ಅವರು ನೀಡಿದದೂರಿನ ಅನ್ವಯಕೂಡಲೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲುರನ್ನು ತನಿಖೆಗೆ ಒಳ ಪಡಿಸಬೇ ಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ನಳಿನ್ ಕುಮಾರ್ ಕಟೀಲು ಅವರನ್ನು ತನಿಖೆಗೆ ಒಳಪಡಿಸುವ ಮೂಲಕ ಪ್ರಕರಣದ ಸತ್ಯಾಂಶವನ್ನು ಬಹಿರಂಗ ಪಡಿಸಬೇಕು. ಬಿಜೆಪಿ ನಾಯಕರೆಂದು ಹೇಳಿಕೊಂಡಿರುವ ಆರೋಪಿಗಳಾದ ಶೇಖರ್ ಹಾಗೂ ರೇವಣ್ಣ ಸಿದ್ದಪ್ಪ ಹಾಗೂ ಇತರರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಿವೃತ್ತ ಅಧಿಕಾರಿ ಶಿವಮೂರ್ತಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಎರಡು ಕೋಟಿ ರೂ.ಗೂ ಹೆಚ್ಚು ಹಣವನ್ನು ಪಡೆದಿದ್ದಾರೆಂದು ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೆಸರು ಸಹ ಕೇಳಿಬಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಹಾಗೂ ದೂರುದಾರ ಶಿವಮೂರ್ತಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.