ಎಂನರೇಗಾ: ಕೇಂದ್ರದಿಂದ ರಾಜ್ಯಗಳಿಗೆ 6,366 ಕೋಟಿ ರೂ. ಬಾಕಿ, ಪ.ಬಂಗಾಳಕ್ಕೆ ಗರಿಷ್ಠಪಾವತಿ ಬಾಕಿ, ಕರ್ನಾಟಕಕ್ಕೆ 630 ಕೋ.ರೂ. ಬಾಕಿ
ಹೊಸದಿಲ್ಲಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ 6,366 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಾಕಿ ಯಿರಿಸಿರುವುದಾಗಿ ಗ್ರಾಮೀಣ ಅಭಿವೃದ್ಧಿಸಚಿವಾಲ ಯವು ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣ ಅಭಿವೃದ್ಧಿ ಖಾತೆಯ ಸಹಾಯಕ ಸಚಿವೆ ಸಾದ್ದಿ ನಿರಂಜನ್ ಈ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರ ಸರಕಾರವು ಪಶ್ಚಿಮಬಂಗಾಳಕ್ಕೆ 2,813 ಕೋಟಿ ರೂ. ಬಾಕಿಯಿರಿಸಿದ್ದು, ಇದು ಅತ್ಯಧಿಕವಾಗಿದೆ. ಐದು ತಿಂಗಳುಗಳಿಗೂ ಅಧಿಕ ಸಮಯದವರೆಗೆ ಕೇಂದ್ರದಿಂದ ಎಂನರೇಗಾ ಹಣ ಪಾವತಿಗೆ ಬಾಕಿಯಿರುವ ಏಕೈಕ ರಾಜ್ಯ ಪಶ್ಚಿಮಬಂಗಾಳವಾಗಿದೆಯೆಂದು ಅವರು ಹೇಳಿದರು. ಉತ್ತರಪ್ರದೇಶಕ್ಕೆ 700 ಕೋಟಿ ರೂ. ಹಾಗೂ ಕರ್ನಾಟಕಕ್ಕೆ 630 ಕೋಟಿ ರೂ.ಗಳೊಂದಿಗೆ ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.
ಎಂನರೇಗಾ ಸಂಘರ್ಷ ಮೋರ್ಚಾ ಹಕ್ಕುಗಳ ಸಮಿತಿ ನೀಡಿರುವ ಅಂಕಿಅಂಶಗಳ ಪ್ರಕಾರ 2021ರ ಡಿಸೆಂಬರ್ 26ರಂದು ಪಶ್ಚಿಮಬಂಗಾಳದಲ್ಲಿ ಎಂನರೇಗಾ ಕಾರ್ಮಿಕರಿಗೆ ಕೊನೆಯ ಬಾರಿಗೆ ವೇತನ ಪಾವತಿಸಲಾಗಿತ್ತು. ಕೇಂದ್ರ ಸರಕಾರವು ಕೂಲಿ ವೇತನ ಸೇರಿದಂತೆ ಎಂನರೇಗಾ ನಿಧಿಗೆ 7,500 ಕೋಟಿಗೂ ಅಧಿಕ ಹಣವನ್ನು ಪಾವತಿಸುವುದನ್ನು ಬಾಕಿಯಿರಿಸಿದೆ. ಎಂನರೇಗಾ ಯೋಜನೆಯಲ್ಲಿ ರಾಜ್ಯ ಸರಕಾರಿ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವುದು ಪಶ್ಚಿಮಬಂಗಾಳಕ್ಕೆ ನಿಧಿಯ ವಿತರಣೆಯನ್ನು ತಡೆಹಿಡಿಯಲು ಕಾರಣವೆಂದು ಕೇಂದ್ರ ಸರಕಾರ ಹೇಳಿಕೊಂಡಿದೆ. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೊಳಿಸಿದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೌಶಲ್ಯರಹಿತ ಕೆಲಸವನ್ನು ಖಾತರಿಪಡಿಸುತ್ತಿದೆ.