ಭೂತಾನ್ನಿಂದ ಅಡಿಕೆ ಆಮದಿಗೆ ಕೇಂದ್ರ ಸರಕಾರ ಅನುಮತಿ; ಕನಿಷ್ಠ ಆಮದು ಬೆಲೆಯ ಷರತ್ತಿಲ್ಲ; ಕರ್ನಾಟಕದ ಅಡಿಕೆ ಬೆಳೆಗಾರರಲ್ಲಿ ನಡುಕ
ಹೊಸದಿಲ್ಲಿ: ಭೂತಾನ್ನಿಂದ ಪ್ರತೀ ವರ್ಷ ಕನಿಷ್ಠ ಆಮದು ಬೆಲೆ (ಎಮ್ಐಪಿ)ಯ ಷರತ್ತಿಲ್ಲದೆ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಲು ಸರಕಾರ ಬುಧವಾರ ಅನುಮೋದನೆ ನೀಡಿದೆ. ಸರಕಾರದ ಈ ನಿರ್ಧಾರವು ಕರ್ನಾಟಕ ಸೇರಿದಂತೆ ದೇಶಾದ್ಯಂತದ ಅಡಿಕೆ ಬೆಳೆಗಾರರಲ್ಲಿ ನಡುಕಹುಟ್ಟಿಸಿದೆ.
2017ರಲ್ಲಿ, ದೇಶದ ಅಡಿಕೆ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಪ್ರತೀ ಕಿಲೋ ಗ್ರಾಮ್ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು 251 ರೂ.ಗೆ ನಿಗದಿಪಡಿಸಿತ್ತು. 2018ರಲ್ಲಿ ಬೆಲೆಯು 251 ರೂ. ಗಿಂತ ಹೆಚ್ಚಿದ್ದರೆ ಯಾವುದೇ ಮಾದರಿಯ ಅಡಿಕೆಯನ್ನು ಆಮದು ಮಾಡಲು ಸರಕಾರ ಅವಕಾಶ ನೀಡಿತ್ತು. ಆದಾಗ್ಯೂ, ಬೆಲೆಯು ಕನಿಷ್ಠ ಆಮದು ಬೆಲೆಗಿಂತ ಕಡಿಮೆಯಿದ್ದರೆ ಅಂಥ ಅಡಿಕೆಗಳ ಆಮದನ್ನು ನಿಷೇಧಿಸಲಾಗಿತ್ತು. ಕನಿಷ್ಠ ಆಮದು ಬೆಲೆಯೆಂದರೆ, ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಆಮದು ಮಾಡಲು ಅವಕಾಶವಿಲ್ಲ. ಜೈಗಾಂವ್ನಲ್ಲಿರುವ ಭೂಸುಂಕ ನಿಲ್ದಾಣ (ಐಎನ್ಜೆಐಜಿಬಿ)ದ ಮೂಲಕ ಭೂತಾನ್ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶವಿದೆ ಎಂದು ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್ಟಿ)ದ ಅಧಿಸೂಚನೆಯೊಂದು ತಿಳಿಸಿದೆ. ಇಂಥ ಆಮದುಗಳಿಗೆ ಡಿಜಿಎಫ್ಟಿ ನೀಡುವ ನೋಂದಣಿ ಪ್ರಮಾಣ ಪತ್ರದ ಅಗತ್ಯವಿದೆ.
“ಭೂತಾನ್ನಿಂದ ಪ್ರತೀ ವರ್ಷ17,000 ಟನ್ ಹೊಸ ಅಡಿಕೆಯನ್ನು ಕನಿಷ್ಠ ಆಮದು ಬೆಲೆಯ ಷರತ್ತಿಲ್ಲದೆ ಎಲ್ಎಸ್ ಜೈಗಾಂವ್ (ಐಎನ್ಜೆಐಜಿಬಿ)ಮೂಲಕ ಆಮದು ಮಡಿಕೊಳ್ಳಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಡಿಜಿಎಫ್ಟಿ ನೀಡುವ ನೋಂದಣಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು'' ಎಂದು ಅಧಿಸೂಚನೆ ತಿಳಿಸಿದೆ.
2022-23ನೇ ಸಾಲಿನ ದ್ವಿತೀಯಾರ್ಧದಲ್ಲಿ ಭೂತಾನ್ನಿಂದ 8,500 ಟನ್ ಹೊಸಅಡಿಕೆಯನ್ನು ಕನಿಷ್ಠ ಆಮದು ಬೆಲೆಯ ಷರತ್ತಿಲ್ಲದೆ ಆಮದು ಮಾಡಿಕೊಳ್ಳ ಬಹುದಾಗಿದೆ ಎಂದು ಸಾರ್ವಜನಿಕ ಅಧಿಸೂಚನೆ ಹೇಳಿದೆ.
2023-24ನೇ ಸಾಲಿನಲ್ಲಿ, ಒಟ್ಟು 17,000 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಅದು ತಿಳಿಸಿದೆ.
ಕೇಂದ್ರ ಸರಕಾರದ ಈ ನಿರ್ಧಾರವು ಭಾರತದ ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬೆದರಿಕೆಯನ್ನು ಒಡ್ಡಿದೆ. ಈ ನಿರ್ಧಾರದಿಂದಾಗಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಅಡಿಕೆಯ ಬೆಲೆ ತೀವ್ರವಾಗಿ ಕುಸಿಯುವ ಸಾಧ್ಯತೆಯಿದೆ ಎಂಬ ಭೀತಿಯನ್ನು ರೈತರು ವ್ಯಕ್ತಪಡಿಸಿದ್ದಾರೆ.