ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ನಡೆದ ಕರ್ನಾಟಕ ಬಂದ್ನಿಂದಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಬರುವ 400 ಕೋಟಿ ರೂ. ಗಳಷ್ಟು ಸರಕಾರಕ್ಕೆ ನಷ್ಟವಾಗಿದೆ ಎಂದು ಎಫ್ ಕೆಸಿಸಿಐ (ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ. ಶುಕ್ರವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಇಂದು ನಡೆದ ಕರ್ನಾಟಕ ಬಂದ್ ಶಾಂತಿಯುತ ವಾಗಿದ್ದು, ಇದಕ್ಕೆ ಕರ್ನಾಟಕದಾದ್ಯಂತ ಇರುವ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು ಶೇ.70 ರಷ್ಟು ಸಂಸ್ಥೆಗಳು ಬೆಂಬಲ ನೀಡಿದ್ದವು ಎಂದರು ಈ ಬಂದ್ಗೆ ಎಫ್ಸಿಸಿಐ ಸಂಪೂರ್ಣ ಬೆಂಬಲ ನೀಡಿತ್ತು. ಈ ಬಂದ್ ನಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂ. ಗಳಷ್ಟು ನಷ್ಟವಾಗಿದೆ. ಆದರೂ, ಕರ್ನಾಟಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಮತ್ತು ನಾಡು, ನುಡಿ, ನೆಲ, ಜಲ, ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎನ್ನುವ ದೃಷ್ಟಿಯಿಂದ ಇದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಬಿಕೋ ಎನ್ನುತ್ತಿದ್ದ ಸಿಲಿಕಾನ್ ಸಿಟಿ: ಕರ್ನಾಟಕ ಬಂದ್ಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಇಡೀ ದಿನ ಸ್ತಬ್ಧವಾಗಿತ್ತು. ಮಾರುಕಟ್ಟೆ, ಮಾಲ್ಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಬಿಎಂಟಿಸಿ ಬಸ್ಗಳ ಓಡಾಟ ಕಂಡಬಂದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಹುತೇಕರು ಬಸ್ಗಳಿಗೆ ಕಾದು ಕಾಲ್ನಡಿಗೆಯಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುರಭವನ, ವಿಧಾನಸೌಧ, ರಾಜಭವನ, ಬಿಬಿಎಂಪಿ, ಸರಕಾರಿ ಕಚೇರಿಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.