ಚುನಾವಣಾ ಆಯೋಗದ ಆದೇಶ; ಶಿಂದೆ ಬಣ ಅಧಿಕೃತ 'ಶಿವಸೇನೆ'; ಬಿಲ್ಲು-ಬಾಣ ಚಿಹ್ನೆ ಬಳಸಲು ಸಮ್ಮತಿ | ಉದ್ಧವ್ ಗೆ ತೀವ್ರ ಮುಖಭಂಗ
ಹೊಸದಿಲ್ಲಿ: ಶಿವಸೇನೆಯ ಏಕನಾಥ್ ಶಿಂದೆ ಬಣಕ್ಕೆ ಪಕ್ಷದ ಅಧಿಕೃತ ಹೆಸರು ಹಾಗೂ 'ಬಿಲ್ಲು-ಬಾಣ' ಚಿಹ್ನೆಯನ್ನು ಉಳಿಸಿಕೊಳ್ಳಲು ಚುನಾವಣಾ ಆಯೋಗ ಶುಕ್ರವಾರ ಆದೇಶ ನೀಡಿದೆ. ಇದರಿಂದ ಉದ್ದವ ಠಾಕ್ರೆ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ನೀಡಲಾದ ಮಧ್ಯಂತರ ಹೆಸರು ಶಿವಸೇನೆ ಯುಬಿಟಿ ಹಾಗೂ ಚುನಾವಣಾ ಚಿಹ್ನೆಯಾಗಿ ಉರಿಯುವ ದೊಂದಿಯನ್ನು ಉಳಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕಸ್ಟಾ ಪೇಶ್ ಹಾಗೂ ಚಿಂಚಾಡ-ಈ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಫೆಬ್ರವರಿ 26ರಂದು ಉಪ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುನ್ನ ಚುನಾವಣಾ ಆಯೋಗದ ಈ ಆದೇಶ ಹೊರ ಬಿದ್ದಿದೆ. ಉಭಯ ಬಣಗಳೂ ತಾವು ನಿಜವಾದ ಶಿವಸೇನೆ ಎಂದು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದವು. ಕಳೆದ ವರ್ಷ ಜೂನ್ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ವಿರುದ್ಧ ಬಂಡಾಯ ಎದ್ದ ಬಳಿಕ ಏಕನಾಥ್ ಶಿಂದೆ ಪಕ್ಷದ ಕುರಿತು ಹಕ್ಕು ಮಂಡಿಸಿದ್ದರು. ತಮ್ಮದು ನಿಜವಾದ ಶಿವಸೇನೆ ಹಾಗೂ ಪಕ್ಷದ ಚುನಾವಣಾ ಚಿಹ್ನೆಯನ್ನು ತಮಗೆ ನೀಡಿ ಎಂದು ಪ್ರತಿಪಾದಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.
ಈ ನಿರ್ಧಾರವನ್ನು ಶಿಂದೆ ಬಣ ಸ್ವಾಗತಿಸಿದರೆ ಠಾಕ್ರೆ ನೇತೃತ್ವದ ಬಣ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದೆ.