ಮುಂಬೈ: ಪಿಎಂ ಕೇರ್ಸ್ ಅಡಿ ಪೂರೈಕೆ ಮಾಡಲಾದ ದೋಷಪೂರಿತ ವೆಂಟಿಲೇಟರ್ಗಳ ಸಮರ್ಥನೆ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತರಾಟೆ
ಮುಂಬೈ: ಪಿಎಂ ಕೇರ್ಸ್ ನಿಧಿಯ ಮೂಲಕ ಖರೀದಿಸಲಾದ ದೋಷಪೂರಿತ ವೆಂಟಿಲೇಟರ್ಗಳ ಉತ್ಪಾದಕರನ್ನು ಸಮರ್ಥಿಸಿಕೊಂಡು ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರಕಾರವನ್ನು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಕೊರೋನ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಿದ ಕುರಿತ ಸ್ವಯಂಪ್ರೇರಿತ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್.ವಿ. ಘುಗೆ ಹಾಗೂ ಬಿ.ಯು. ದೇಬದ್ವರ್ ಅವರು ವಿಚಾರಣೆ ನಡೆಸಿದರು.
ಕೇಂದ್ರ ಸರಕಾರ ಪೂರೈಸಿದ 150 ವೆಂಟಿಲೇಟರ್ ಗಳಲ್ಲಿ 113 ದೋಷಪೂರಿತ, ಬಹುತೇಕ ಟಿಲೇಟರ್ ಗಳು ದೋಷಪೂರಿತವಾಗಿರುವುದ ರಿಂದ ಉಳಿದ 37 ವೆಂಟಿಲೇಟರ್ಗಳ ಬಾಕ್ಸ್ ಅನ್ನು ತೆರೆದಿಲ್ಲ. ಎಲ್ಲ ವೆಂಟಿಲೇಟರ್ಗಳನ್ನು ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಪೂರೈಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರಕಾರವನ್ನು ಪ್ರತಿನಿಧಿಸಿದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ಆರ್. ಕಾಳೆ ಪ್ರತಿಪಾದಿಸಿದ ಬಳಿಕ ಔರಂಗಾಬಾದ್ ಪೀಠ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಮೇ 25ರಂದು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.
ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರಕಾರ, ಈ ವೆಂಟಿಲೇಟರ್ಗಳನ್ನು ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಪೂರೈಕೆ ಮಾಡಿಲ್ಲ. ಬದಲಾಗಿ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಪೂರೈಕೆ ಮಾಡಲಾಗಿದೆ. ವೆಂಟಿಲೇಟರ್ ಗಳು ದೋಷಪೂರಿತವಾಗಿವೆ ಎಂದು ಮಹಾರಾಷ್ಟ್ರ ಸರಕಾರ ಲಿಖಿತ ದೂರು ದಾಖಲಿಸಿಲ್ಲ. ಬದಲಾಗಿ ಅದು ಈ ವೆಂಟಿಲೇಟರ್ಗಳನ್ನು ನಿರ್ವಹಿಸಲು ಆಸ್ಪತ್ರೆಯಲ್ಲಿ ತರಬೇತು ಪಡೆದ ವೈದ್ಯಕೀಯ ಅಧಿಕಾರಿಗಳು ಇಲ್ಲ ಎಂದು ಹೇಳಿತ್ತು ಎಂದು ತಿಳಿಸಿದೆ.
ಪಿಎಂ ಕೇರ್ಸ್ ನಿಧಿ ಮೂಲಕ ಕರ್ನಾಟಕ ಸ್ವೀಕರಿಸಿದ 1,800 ವೆಂಟಿಲೇಟರ್ಗಳು ಬಳಕೆಯಾಗಿಲ್ಲ!
ಹೊಸದಿಲ್ಲಿ: ಕರ್ನಾಟಕದಲ್ಲಿ ಆಸ್ಪತ್ರೆಗಳು ವೆಂಟಿಲೇಟರ್ ಹಾಗೂ ಆಮ್ಲಜನಕದ ಕೊರತೆ ಎದುರಿಸುತ್ತಿರುವ ನಡುವೆ ಕೇಂದ್ರ ಸರಕಾರದಿಂದ ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಸ್ವೀಕರಿಸಲಾದ 1,800 ವೆಂಟಿಲೇಟರ್ಗಳು ಬಳಕೆಯಾಗಿಲ್ಲ ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.
ರಾಜ್ಯಕ್ಕೆ ಕಳೆದ ವರ್ಷ ಕೊರೋನದ ಮೊದಲನೇ ಅಲೆಯ ಸಂದರ್ಭ ಪಿಎಂ ಕೇರ್ಸ್ ನಿಧಿಯ ಅಡಿಯಲ್ಲಿ ಮಂಜೂರು ಮಾಡಲಾದ 3,200 ವೆಂಟಿಲೇಟರ್ಗಳಲ್ಲಿ ಇದುವರೆಗೆ ಕೇವಲ 1,400 ವೆಂಟಿಲೇಟರ್ಗಳು ಮಾತ್ರ ಬಳಕೆಯಾಗಿವೆ.
ಕೊರೋನ ಮೊದಲನೇ ಅಲೆಯ ಸಂದರ್ಭ ಸುಮಾರು 2,000 ವೆಂಟಿಲೇಟರ್ಗಳನ್ನು ಸ್ವೀಕರಿಸಲಾಗಿತ್ತು. ಎರಡನೇ ಅಲೆಯ ಸಂದರ್ಭ ಉಳಿದ ವೆಂಟಿಲೇಟರ್ಗಳನ್ನು ಸ್ವೀಕರಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ರಾಜ್ಯದಲ್ಲಿ ಈ ವರ್ಷ ಕೊರೋನ ಸೋಂಕಿನ ಎರಡನೇ ಅಲೆಗೆ ಮುನ್ನ ಕೇವಲ 150 ವೆಂಟಿಲೇಟರ್ ಗಳು ಮಾತ್ರ ಬಳಕೆಯಾಗಿವೆ. ಉಳಿದ 1,400 ವೆಂಟಿಲೇಟರ್ಗಳನ್ನು ಆಸ್ಪತ್ರೆಗಳಿಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ವಿತರಿಸಲಾಗಿತ್ತು ಎಂದು ವರದಿ ಹೇಳಿದೆ. ವೆಂಟಿಲೇಟರ್ಗಳ ಕಾರ್ಯ ನಿರ್ವಹಣೆಗೆ ತಂತ್ರಜ್ಞರು, ವೈದ್ಯರು, ಅನೆಸ್ಥೆಶಿಯಾ ತಜ್ಞರು ಹಾಗೂ ನರ್ಸ್ಗಳಂತಹ ನುರಿತ ಸಿಬ್ಬಂದಿಯ ಕೊರತೆ ಇದ್ದುದರಿಂದ ಆಸ್ಪತ್ರೆಗಳಲ್ಲಿ ಉಳಿದ 1,800 ವೆಂಟಿಲೇಟರ್ಗಳು ಬಳಕೆಯಾಗದೆ ಹಾಗೇ ಉಳಿದುಕೊಂಡಿವೆ. ಇತರ ಕೆಲವು ವೆಂಟಿಲೇಟರ್ಗಳು ತಾಂತ್ರಿಕ ದೋಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವರದಿ ಹೇಳಿದೆ.