ಭಟ್ಕಳ: ಭಟ್ಕಳದಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರವಾರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತಲ್ಲೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ 11:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತ ಯುವಕನನ್ನು ಭಟ್ಕಳ ಶಿಫಾ ಕ್ರಾಸ್ ಬಳಿಯ ನಿವಾಸಿ ಮುಹಮ್ಮದ್ ಸಮಿಯಾನ್ ಗಂಗಾವಳಿ (32) ಎಂದು ಗುರುತಿಸಲಾಗಿದೆ.ಗಾಯಗೊಂಡ ಯುವಕನನ್ನು ತನ್ವೀರ್ ಅಹಮದ್ ಎಂದು ಗುರುತಿಸಲಾಗಿದೆ.
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಯುವಕರಿಬ್ಬರು ಯಾವುದೋ ಕೆಲಸದ ನಿಮಿತ್ತ ಕಾರವಾರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದು, ಕಾರವಾರಕ್ಕೆ ತೀರಾ ಸಮೀಪ ತಲುಪಿದ ಬಳಿಕ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಏಕಾಏಕಿ ಪ್ರಾಣಿಯೊಂದು ಅಡ್ದ ಬಂದಿದ್ದು ಬೈಕ್ ನಲ್ಲಿದ್ದ ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ದಾರಿಯಲ್ಲಿದ್ದ ಜನರು ಆಸ್ಪತ್ರೆಗೆ ಕರೆದೊಯ್ದರು, ಆದರೆ ಓರ್ವ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ಸದ್ಯ ಮೊಹಮ್ಮದ್ ಸಮಿಯಾನ್ ಅವರ ಮೃತದೇಹ ಕಾರವಾರ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನದ ವೇಳೆಗೆ ಭಟ್ಕಳ ತಲುಪುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.