ಪಟ್ನಾ: ಸಾಲ ಸಂಪೂರ್ಣ ಮರು ಪಾವತಿಸಿದ ಬಳಿಕ ಹೆಚ್ಚುವರಿ 1,500 ರೂ. ಪಾವತಿಸಲು ನಿರಾಕರಿಸಿದ ದಲಿತ ಮಹಿಳೆಯೊಬ್ಬರನ್ನು ಲೇವಾದೇವಿಗಾರ ಹಾಗೂ ಆತನ ಸಹಚರರು ವಿವಸ್ತ್ರಗೊಳಿಸಿ ಥಳಿಸಿದ ಹಾಗೂ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಪಟ್ನಾದಲ್ಲಿ ನಡೆದಿದೆ.
ಪಟ್ನಾದ ಖುಸ್ರುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆ ಬಳಿಕ ಪ್ರಮುಖ ಆರೋಪಿಗಳಾದ ಲೇವಾದೇವಿಗಾರ ಪ್ರಮೋದ್ ಸಿಂಗ್ ಹಾಗೂ ಆತನ ಪುತ್ರ ಅಂಶು ಸಿಂಗ್ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನನ್ನ ಪತಿ ಕೆಲವು ತಿಂಗಳ ಹಿಂದೆ ಪ್ರಮೋದ್ ಸಿಂಗ್ನಿಂದ 1,500 ರೂ. ಸಾಲ ತೆಗೆದುಕೊಂಡಿದ್ದರು. ಆ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸಿದ್ದರು. ಆದರೆ, ಆತ ಇನ್ನಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದ. ಆದರೆ, ನಾವು ಈ ಬೇಡಿಕೆಯನ್ನು ತಿರಸ್ಕರಿಸಿದೆವು. ಹೆಚ್ಚುವರಿ ಹಣ ಪಾವತಿಸದೇ ಇದ್ದರೆ, ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡಿಸುವುದಾಗಿ ಪ್ರಮೋದ್ ಸಿಂಗ್ ಫೋನ್ ಮಾಡಿ ಬೆದರಿಕೆ ಒಡ್ಡಿದ್ದ' ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. “ಸಾಲದ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರ ತಂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿತ್ತು. ಇದರಿಂದ ಪ್ರಮೋದ್ ಆಕ್ರೋಶಿತನಾಗಿದ್ದನು. ಆತ ಅದೇ ದಿನ ರಾತ್ರಿ ಸಹಚರರನ್ನು ಕಳುಹಿಸಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದನು.
ಸಹಚರರು ಬಂದು ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದರು ಎಂದು ಕುಟುಂಬದ ಸದಸ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ. “ಅವರು ನನಗೆ ಬೆತ್ತ ಹಾಗೂ ಕೈಯಿಂದ ಥಳಿಸಿದ್ದಾರೆ. ಪ್ರಮೋದ್ ತನ್ನ ಮಗನಲ್ಲಿ ನನ್ನ ಬಾಯಿಗೆ ಮೂತ್ರ ವಿಸರ್ಜಿಸುವಂತೆ ಹೇಳಿದ್ದ. ಆತ ಅದೇ ರೀತಿ ಮಾಡಿದ. ನಾನು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆ ಸೇರಿದೆ'' ಎಂದು ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.