ಭಟ್ಕಳ: ಕೇಂದ್ರದಲ್ಲಿನ ಮೋದಿ ಸರ್ಕಾರದಿಂದಾಗಿ ಕಳೆದ ನಾಲ್ಕ ವರ್ಷದಿಂದ ಮೀನುಗಾರರ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗಿದೆ ಎಂದು ಮೀನುಗಾರರ ಸಮುದಾಯದ ಮುಖಂಡ ರಾಮ ಮೊಗೇರ್ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀನುಗಾರರಿಗೆ ಜಿ.ಎಸ್.ಟಿ ಯಿಂದಾಗಿ ಬಹಳಷ್ಟು ತೊಂದರೆಯಾಗುತ್ತಿದೆ. ಬಲೆ, ರೋಪ್,ಎಂಜಿನ್, ಒಣಮೀನು ಮೇಲೆ ಜಿ.ಎಸ್.ಟಿ ಹಾಕುವುದರ ಮೂಲಕ ಮೀನುಗಾರರ ಸಂಕಷ್ಟವನ್ನು ಅನುಭವಿಸುವಂತೆ ಮಾಡಿದ್ದಾರೆ. ಬಿಜೆಪಿಗರು ಕೇವಲ ಸುಳ್ಳು ಹೇಳುವುದನ್ನೆ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದು ಭಟ್ಕಳದ ಅಭಿವೃದ್ಧಿಯ ಹರಿಕಾರ ಮಾಂಕಾಳ್ ವೈದ್ಯರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಲ್ಲದೆ ಜಾತಿಯ ಹೆಸರು ಹೇಳಿ ನಿಂದಿಸುತ್ತಿದ್ದು ಇದು ಮೀನುಗಾರ ಸಮುದಾಯಕ್ಕೆ ಬಹಳ ನೋವುಂಟು ಮಾಡಿದೆ ಯಾವುದೇ ಕಾರಣ ನಮ್ಮ ಸಮುದಾಯದ ನೇತಾರ ಮಾಂಕಾಳರನ್ನು ನಿಂದಿಸುವ, ತೋಜೋವಧೆ ಮಾಡುವ ಕೆಲಸವನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು. ಜಾತಿ ರಾಜಕಾರಣ ಮಾಡುತ್ತಿರುವ ಬಿಜೆಪಿಗರು ಹಿಂದುತ್ವದ ಹುಸಿ ಮುಖವಾಡ ಧರಿಸಿದ್ದಾರೆ. ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ನಮಗೆ ಹಿಂದೂ ಧರ್ಮದ ಬಗ್ಗೆ ಗೌರವವಿದೆ. ಆದರೆ ಈ ಡೋಂಗಿಗಳಿಂದ ನಾವು ಹಿಂದೂ ಧರ್ಮದ ಕುರಿತಂತೆ ಪಾಠ ಕಲಿಯುವ ಅಗತ್ಯವಿಲ್ಲ. ನೀವು ನಿಮ್ಮ ಕೆಲಸ ಮಾಡಿ ಅಭಿವೃದ್ಧಿ ಕುರಿತಂತೆ ಮತಕೇಳಿ ಸುಖಸುಮ್ಮನೆ ಹಿಂದುತ್ವದ ಹೆಸರನ್ನು ಹಾಳು ಮಾಡಬೇಡಿ. ಬಿಜೆಪಿಯ ಶಾಸಕ ಗೌರವಯುತ ಡಾ.ಚಿತ್ತರಂಜನ್ ಹಾಗೂ ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕರ ಕೊಲೆಗಾರರನ್ನು ಹಿಡಿಯಲು ಆಗದ ನಿಮಗೆ ಅವರ ಹೆಣಗಳನ್ನು ಮುಂದಿಟ್ಟುಕೊಂಡೂ ಈಗಲೂ ರಾಜಕೀಯ ಮಾಡುತ್ತಿದ್ದೀರಿ. ಚಿತ್ತರಂಜನ್ ಕೊಲೆಯಾದಾಗ ಅಡ್ವಾಣಿ, ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಬಂದು ಕಣ್ಣಿರು ಸುರಿಸಿದ್ದೀರಿ ಅದರ ಅನುಕಂಪದಿಂದಲೇ ಶಾಸಕನಾಗಿ ಮಂತ್ರಿಯಾದ ಶಿವಾನಂದಾ ನಾಯ್ಕರು ವಿಧಾಸನ ಸಭೆಯಲ್ಲಿ ಒಂದೂ ಮಾತನ್ನು ಆಡದೆ ಹಿಂದೂತ್ವದ ಡೋಂಗಿತನವನ್ನು ಪ್ರದರ್ಶಿಸುತ್ತಿದ್ದೀರಿ ಎಂದು ಲೆವಡಿ ಮಾಡಿದರು.
ಖಾರ್ವಿ ಸಮಾಜದ ಮುಖಂಡ ವಸಂತ ಖಾರ್ವಿ ಮಾತನಾಡಿ,ಶಾಸಕರು ತಮ್ಮ ನಾಲ್ಕ ವರ್ಷದ ಅವಧಿಯಲ್ಲಿ ಮೀನುಗಾರ ಸಮಾಜ ಹಾಗೂ ಇತರ ಎಲ್ಲ ಸಮಾಜದ ಅಭಿವೃದ್ಧಿಯನ್ನು ಮಾಡಿದ್ದು ಮೀನುಗಾರರು ಮೃತರಾದರೆ 2ಲಕ್ಷ ಕೊಡುತ್ತಿದ್ದ ಪರಿಹಾರಧನವನ್ನು ಮಾಂಕಾಳರು 6ಲಕ್ಷಕ್ಕೂ ಹೆಚ್ಚಿಸಿದ ಕೀರ್ತಿ ಅವರದ್ದು. ಮೀನುಗಾರರು ಸತ್ತರೆ ಅವರ ಹೆಣ ಹುಡುಕಲು ಪರದಾಡುವಂತಹ ಸನ್ನಿವೇಶ ಇತ್ತು ಆದರೆ ಮಾಂಕಾಳರು ತಮ್ಮ ಅವಧಿಯಲ್ಲಿ ದುರಂತ ಸಂಭವಿಸಿದಾಗ ಕೂಡಲೆ ಸ್ಪಂಧಿಸಿ ಹೆಲಿಕಾಪ್ಟರ್ ಮೂಲಕ ಮೃತದೇಹಗಳ ಪತ್ತೆಗೆ ನೆರವಾದರು. ಕ್ಷೇತ್ರದ ಎಲ್ಲ ಮೀನುಗಾರ ಬಾಂಧವರು ಮಾಂಕಾಳ ವೈದ್ಯರ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸಲು ಪಣತೊಡಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೋಗೇರ್ ಸಮಾಜದ ಅಧ್ಯಕ್ಷ ಭಾಸ್ಕರ್ ಮೊಗೇರ್,ಗಾಬಿತ ಸಮಾಜ ಮುಖಂಡ ಮೋಹನ್ ಗಾಬಿತ, ಹರಿಕಾಂತ್ ಸಮಾಜದ ಕೃಷ್ಣ ಹರಿಕಾಂತ್, ಎನ್.ಎನ್. ಖಾರ್ವಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.