ಭಟ್ಕಳ: ಪಟ್ಟಣದ ಪುರಸಭೆ ವ್ಯಾಪ್ತಿಯ ಗುಳ್ಮಿ ರೋಡ್ನಲ್ಲಿರುವ ಚರಂಡಿ ನೀರು ಬ್ಲಾಕ್ ಆಗಿ ಬಾವಿಗಳಿಗೆ ಸೇರುತ್ತಿರುವ ಪರಿಣಾಮ ಜನರು ಕುಡಿಯಲು ನೀರಿಲ್ಲದೇ ಪರಿತಪಿಸಿದ ಘಟನೆ ಶನಿವಾರದಂದು ನಡೆದಿದೆ.
ಕೊರೋನ ಕಾಟ ಒಂದು ಕಡೆ ಯಾದರೆ, ಇನ್ನೊಂದು ಕಡೆ ನೀರಿಗಾಗಿ ಪರದಾಟ ಶುರುವಾಗಿದೆ. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲೇ ಪಟ್ಟಣದ ಗುಳ್ಮಿ ರಸ್ತೆಯಲ್ಲಿ ಚರಂಡಿರಲ್ಲಿನ ಬ್ಲಾಕೇಜ್ನಿಂದಾಗಿ 50- 60 ಮನೆಗಳ ಬಾವಿಯ ನೀರು ಕಲುಷಿತಗೊಂಡಿದೆ. ಇದರಿಂದಾಗಿ ಬಾವಿಯಲ್ಲಿ ನೀರಿದ್ದರೂ ಕುಡಿಯಲಷ್ಟೇ ಅಲ್ಲದೆ, ಇತರ ಕೆಲಸಕ್ಕೂ ಬಳಸಲಾಗದ ಸ್ಥಿತಿ ಉದ್ಭವಿಸಿದೆ. ಪುರಸಭೆಯ ಬಹುತೇಕ ಎಲ್ಲಾ ವಾರ್ಡ್ಗಳ ಒಳಚರಂಡಿಯ ಸ್ಥಿತಿ ಇದೇ ಆಗಿದೆ.
ಪ್ರತಿ ಬಾರಿಯೂ ಚರಂಡಿ ಬ್ಲಾಕ್ ಆದಾಗ ನೀರು ಬಾವಿ ಸೇರುತ್ತಿದೆ. ಇಂತಹ ಚರಂಡಿ ಇದ್ದರೆಷ್ಟು, ಬಿಟ್ಟರೆಷ್ಟು ಕೂಡಲೇ ಇದನ್ನು ದುರಸ್ತಿಪಡಿಸಿ. ಇಲ್ಲವಾದರೆ ಶಾಶ್ವತವಾಗಿ ಚರಂಡಿಯನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿ ಪುರಸಭೆಗೆ ಹಿಡಿಶಾಪ ಹಾಕಿದ್ದಾರೆ.
ಇಲ್ಲಿನ ನಿವಾಸಿ ತುಳಸಿದಾಸ ಪ್ರಭು ಎನ್ನುವವರ ಮನೆಯಿಂದ ಹಿಡಿದು ಗುಳ್ಮೆಯ ಮಸ್ಜಿದ್ ವರೆಗಿನ ಎಲ್ಲಾ ಬಾವಿಗಳ ನೀರು ಕುಡಿಯಲು ಬಳಸದಂತಾಗಿದೆ. ಈ ಭಾಗದಲ್ಲಿ ಸುಮಾರು 60ಕ್ಕೆ ಹೆಚ್ಚು ಮನೆಗಳಿದ್ದು, ಇಲ್ಲಿನ ಜನರು ನೀರನ್ನು ಮನೆಯ ಬೇರೆ ಕೆಲಸಕ್ಕೆ ಬಳಸಲೂ ಆಗುತ್ತಿಲ್ಲ. ಇದರಿಂದಾಗಿ ನೀರು ತರಲು ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಒಂದೆಡೆ ಕೊರೋನಾ ಸಂಕಷ್ಟದಿಂದ ಹೊರ ಬರುವಂತಿಲ್ಲ. ಇನ್ನೊಂದೆಡೆ ಇದ್ದ ನೀರು ಬಳಸುವಂತಿಲ್ಲ. ಮತ್ತೊಂದೆಡೆ ಚರ೦ಡಿ ಸಂಪೂರ್ಣ ಬ್ಲಾಕ್ ಆಗಿದ್ದು, ಹೊಲಸು ನೀರು ಕೂಡ ಹರಿದು ಹೋಗುತ್ತಿಲ್ಲ. ಇಲ್ಲಿನ ಶೌಚಕ್ಕೂ ಪರದಾಡಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಂದು ಬಾರಿಯ ಸಮಸ್ಯೆ ಅಲ್ಲ. ಪ್ರತಿ ಬಾರಿಯೂ ಇದೇ ಸಮಸ್ಯೆ. ಎಷ್ಟು ಸಲ ಬಾವಿಯ ನೀರು ಶುದ್ಧ ಮಾಡಲು ಸಾಧ್ಯ? ಶಾಶ್ವತ ಪರಿಹಾರ ಕಲ್ಲಿಸುವಂತೆ ಪುರಸಭೆಗೆ, ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿದೆ. ಇನ್ನು ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದೊಂದೇ ಬಾಕಿ ಇರುವುದು ಎಂದು ಇಲ್ಲಿನ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ವ್ಯವಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ.