ಭಟ್ಕಳ: ಇದೆಂತಹ ಕೊರೊನಾ? ಶೀತ, ಜ್ವರ ಪೀಡಿತ ಎಲ್ಲರೂ ಕೊರೊನಾ ಸೋಂಕಿತರ ಪಟ್ಟಿಯನ್ನು ಸೇರುತ್ತಿದ್ದಾರೆ. ಈ ಹಿಂದೆ ಜನರಿಗೆ ಬರುತ್ತಿದ್ದ ಜ್ವರ, ತಂಡಿಗಳು ಈಗ ಎಲ್ಲಿ ಹೋಗಿವೆ ಎಂದು ಗುರುವಾರ ನಡೆದ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆತಂಕ ಹೊರ ಹಾಕಿದ ಘಟನೆ ನಡೆದಿದೆ.
ಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ವಿಷ್ಣು ದೇವಡಿಗ, ಪ್ರಸಕ್ತವಾಗಿ ಕೊರೊನಾ ಕಾರಣದಿಂದ ಜನರು ವಿನಾ ಕಾರಣ ಆತಂಕ ಎದುರಿಸುತ್ತಿದ್ದಾರೆ. ಶೀತ, ಜ್ವರ ಇದ್ದವರೆಲ್ಲ ಕೊರೊನಾ ಸೋಂಕಿತರಾಗುತ್ತಿದ್ದು, ಜ್ವರ ಬಂದರೆ ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದಾರೆ, ಈ ಬಗ್ಗೆ ಜನ ಜಾಗೃತಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ಜ್ವರ, ತಂಡಿ ಇದ್ದವರೆಲ್ಲ ಕೊರೊನಾ ಸೋಂಕಿತರಲ್ಲ. ಶೀತ, ಜ್ವರ ಬಂದ ಎಲ್ಲರನ್ನೂ ನಾವು ಕೊರೊನಾ ಪರೀಕ್ಷೆಗೆ ಒಳಪಡಿಸುವುದಿಲ್ಲ. ಯಾರಿಗೆ ಸೋಂಕಿನ ಲಕ್ಷಣ ಇದೆಯೋ ಅಂತವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು. ರೈತರು ಹೈನುಗಾರಿಕೆ ನಡೆಸಲು ಸಹಕಾರಿ ಸಂಘದಿಂದ ಸಾಲ ಸೌಲಭ್ಯ ಪಡೆಯುವ ಅವಕಾಶ ಇದ್ದು, ಪ್ರಯೋಜನ ಪಡೆದುಕೊಳ್ಳುವಂತೆ ಪಶುವೈದ್ಯ ಡಾ.ವಿವೇಕಾನಂದ ಹೆಗಡೆ ತಿಳಿಸಿದರು. ಕೃಷಿ ಇಲಾಖೆಯ ವತಿಯಿಂದ ಬೆಳೆ ಸಮೀಕ್ಷೆಗೆ ಆ್ಯಪ್ ಸಿದ್ಧಪಡಿಸಲಾಗಿದ್ದು, ಇದನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ಅನುಷ್ಠಾನಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ತಾಲೂಕು ಪಂಚಾಯತ ಉಪಾಧ್ಯಕ್ಷೆ ರಾಧಾ ಅಶೋಕ ವೈದ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಫಯಾಜ್ ಉಪಸ್ಥಿತರಿದ್ದರು.