ಭಟ್ಕಳ: ತಾಲೂಕಿನ ಬೇಂಗ್ರೆ ಗ್ರಾ.ಪಂ.ವ್ಯಾಪ್ತಿಯ ಮಲ್ಲಾರಿ ಎಂಬಲ್ಲಿ ಶಿಲೆಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಬುಧವಾರ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಿದರು.
ಗಣಿಗಾರಿಕೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಆಪತ್ತು ಒದಗಿ ಬಂದಿದೆ. ರೈತರು ನಷ್ಟದಲ್ಲಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಲ್ಲಿನ ಗಣಿಗಾರಿಕೆ ಹೀಗೆಯೆ ಮುಂದುವರೆದರೆ ನಮ್ಮ ಬದುಕುವ ಹಕ್ಕು ಕಸಿದುಕೊಂಡಂತಾಗುತ್ತದೆ. ಗಣಿಗಾರಿಕೆ ನಡೆಯುವ ಅಣತಿ ದೂರದಲ್ಲಿ ಮಲ್ಲಾರಿ ಶಾಲೆ ಇದೆ. ಇಲ್ಲಿ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿರುವ ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೇಂಗ್ರೆ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಮಲ್ಲಾರಿ ಭಾಗದಲ್ಲಿ ನಡೆಯುತ್ತಿರುವ ಶಿಲೆಕಲ್ಲು ಗಣಿಗಾರಿಕೆ ಅಕ್ರಮವಾಗಿದೆ. ಪಂಚಾಯತ್ ನಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಗಣಿ ಇಲಾಖೆಯ ಅಧಿಕಾರಿಗಳು ಪಂಚಾಯತ್ ಗೆ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಡಾ.ನಯನಾ, ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯರಾದ ಚಂದ್ರು ನಾಯ್ಕ, ರಾಮಚಂದ್ರ ನಾಯ್ಕ, ರಾಮ ನಾಗಪ್ಪ ನಾಯ್ಕ, ಮಾಸ್ತಮ್ಮ ನಾಯ್ಕ, ನೀಲಾ ನಾಯ್ಕ ಮತ್ತಿತರರು ಇದ್ದರು.