ಭಟ್ಕಳ: ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಹೊಸ ಆಯಾಮ ದೊರಕಿಸಿಕೊಡಲು ಭಟ್ಕಳದ ಸಮೀಪದ ಒತ್ತಿನೆಣೆಯಲ್ಲಿ ವಿಮಾನ ನಿಲ್ಧಾಣ ಪ್ರಸ್ತಾವಕ್ಕೆ ಮತ್ತೆ ಜೀವ ತುಂಬಲು ಪ್ರತ್ನಿಸಲಾಗುತ್ತಿರುವುದು ಎಲ್ಲೋ ಒಂದು ಕಡೆಯಲ್ಲಿ ಆಶಾಭಾವನೆ ಚಿಗುರೊಡೆದಿದೆ.
ಈ ಹಿಂದೆ ಉಡುಪಿ ಜಿಲ್ಲೆಯ ಒತ್ತಿಣೆಯಲ್ಲಿ ನೌಕಾನೆಲೆಯನ್ನು ಮಾಡುವ ಕುರಿತು ಪ್ರಸ್ತಾವನೆ ಹೋಗಿದ್ದರೂ ಕೂಡಾ ನಂತರ ಅದು ಕಾರವಾರಕ್ಕೆ ಸ್ಥಳಾಂತರಗೊಂಡಿತ್ತು. ಒತ್ತಿನೆಣೆಯಲ್ಲಿ ಸರಕಾರ ಹಾಗೂ ಖಾಸಗೀ ಸಹಭಾಗಿತ್ವದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಮುರ್ಡೇಶ್ವರದ ಆರ್. ಎನ್. ಶೆಟ್ಟಿಯವರು ಜಂಟಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಮಾಡುವ ಪ್ರಸ್ತಾವನೆ ಹೋಗಿತ್ತಾದರೂ ಕೂಡಾ ಅಲ್ಲಿರುವುದು ದಟ್ಟ ಅರಣ್ಯ ಎನ್ನುವ ಕುರಿತು ತಪ್ಪು ಕಲ್ಪನೆ ಹೋಗಿದ್ದರಿಂದ ಸಾಧ್ಯವಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದೇ ಆಸೆ ಮತ್ತೆ ಚಿಗುರೊಡೆದಿದ್ದು ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ ಮಲ್ಟಿ ಮೊಡೆಲ್ ನ್ಯೂ ಇಂಟರ್ನ್ಯಾಶನಲ್ ಏರ್ಪೋರ್ಟ ಮತ್ತು ಕಾರ್ಗೋ ಹಬ್ ನಿರ್ಮಾಣ ಮಾಡುವ ಕುರಿತು ಕಾಗದ ಪತ್ರಗಳು ಓಡಾಡುತ್ತಿವೆ.
ಉಡುಪಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಹಾಗೂ ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಧಿಕ ಪ್ರವಾಸೋಧ್ಯಮ ತಾಣಗಳಾದ ಉಡುಪಿ ಶ್ರೀ ಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಶ್ರೀ ಮುರ್ಡೇಶ್ವರ ದೇವಸ್ಥಾನ, ಇಡಗುಂಜಿ ಶ್ರೀ ಮಹಾಗಣಪತಿ ದೇವಸ್ಥಾನ, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನಗಳು ಇತ್ಯಾದಿ ಅಭಿವೃದ್ಧಿಗೆ ಇದು ಬಹಳ ಸಹಕಾರಿ ಎಂದು ಉಡುಪಿ ಜಿಲ್ಲೆಯ ಮೆಸ್ಕಾಂ ನಿರ್ದೇಶಕ ರಿಯಾಜ್ ಅಹಮ್ಮದ್ ಅವರು ನೀಡಿದ ಕೋರಿಕೆಯಂತೆ ಈಗಾಗಲೇ ಒಂದು ಸುತ್ತಿನ ಪ್ರಾಥಮಿಕವಾಗಿ ಭೂಮಿ ಗುರುತಿಸುವಿಕೆ ಕಾರ್ಯವನ್ನು ಕಂದಾಯ ಇಲಾಖೆ ಮಾಡಿದ್ದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿಯೇ ಒತ್ತಿನೆಣೆ ಪ್ರಶಸ್ತ ಸ್ಥಳ ಎನ್ನುವುದನ್ನೂ ಕೂಡಾ ಹೇಳಿದೆ. ರಾಜ್ಯದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಪತ್ರದಂತೆ ಒತ್ತಿನೆಣೆಯ ಸುಮಾರು 1700 ಎಕರೆ ಪ್ರದೇಶದಲ್ಲಿ ಯಾವುದೇ ವಸತಿ, ಬೆಲೆಬಾಳುವ ಕೃಷಿ ಜಮೀನು ಇಲ್ಲಾದ್ದರಿಂದ ಹಾಗೂ ದಾಖಲೆಗಳಲ್ಲಿ ಇದು ದಟ್ಟ ಅರಣ್ಯ ಎಂತಾ ಇದ್ದರೂ ಕೂಡಾ ವಾಸ್ತವವಾಗಿ ಇಲ್ಲಿ ಕುರುಚಲು ಗಿಡ ಹಾಗೂ ಗಟ್ಟಿಯಾದ ಮೇಲ್ಮೈ ಉಳ್ಳ ನೆಲ ಮಾತ್ರ ಇದೆ ಎಂದೂ ವರದಿಯಲ್ಲಿ ತಿಳಿಸಿದ್ದರಿಂದ ವಿಮಾನ ನಿಲ್ಧಾಣಕ್ಕೆ ಸೂಕ್ತ ಸ್ಥಳ ಎನ್ನುವುದನ್ನು ಈಗಾಗಲೇ ಮನಗಂಡಿದೆ.
* ವಿದೇಶಗಳಲ್ಲಿರುವವರಿಗೆ ವರದಾನ: ಭಟ್ಕಳ ಹಾಗೂ ಬೈಂದೂರು ನಡುವಿನ ಒತ್ತಿನೆಣೆಯಲ್ಲಿ ವಿಮಾನ ನಿಲ್ಧಾಣ/ಕಾರ್ಗೋ ಹಬ್ ನಿರ್ಮಾಣ ಮಾಡುವುದರಿಂದ ಉಡುಪಿ, ಕುಂದಾಪುರ, ಬೈಂದೂರು, ಶಿರೂರು, ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಸಿರಸಿಯವರಿಗೆ ಇದು ತೀರಾ ಹತ್ತಿರವಾಗುವುದರಿಂದ ವಿದೇಶದಲ್ಲಿರುವ ಲಕ್ಷಾಂತರ ಜನರಿಗೆ ಅನುಕೂಲವಾಗುವುದು. ಈ ಭಾಗದಿಂದ ವಿದೇಶದಲ್ಲಿರುವವರು ಪ್ರತಿ ವರ್ಷದಲ್ಲಿ ಎರಡು ಮೂರು ಬಾರಿ ತಾಯ್ನಾಡಿಗೆ ಬಂದು ಹೋದರೂ ಕೂಡಾ ದೂರದ ಮಂಗಳೂರು ಇಲ್ಲವೇ ಗೋವಾವನ್ನೇ ಅವಲಂಭಿಸುವ ಅನಿವಾರ್ಯತೆ ಇದ್ದು ಒತ್ತಿನೆಣೆ ವಿಮಾನ ನಿಲ್ದಾಣವಾದರೆ ತೀರಾ ಹತ್ತಿರವಾಗುವುದರಿಂದ ಅನುಕೂಲವಾಗುವುದಲ್ಲದೇ ಸಮಯದ ಉಳಿತಾಯ ಕೂಡಾ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋಧ್ಯಮ ಇನ್ನಷ್ಟು ಬೆಳೆಯುವುದರೊಂದಿಗೆ ಆರ್ಥಿಕ ಪ್ರಗತಿಗೆ ರಹದಾರಿಯಾಗುವುದು.
* ಒತ್ತಿನೆಣೆ ಪ್ರದೇಶದ ಸುಮಾರು 1700 ಎಕರೆ ಪ್ರದೇಶದಲ್ಲಿ ಯಾವುದೇ ಉತ್ತಮ ಜಾತಿಯ ಮರಗಳು, ಕಾಡು ಇಲ್ಲದಿದ್ದರೂ ಸಹ ಕಂದಾಯ ದಾಖಲೆಗಳಲ್ಲಿ, ಅರಣ್ಯ ದಾಖಲೆಗಳಲ್ಲಿ ಮೀಸಲು ಅರಣ್ಯ ಎಂದು ನಮೂದಿಸಿರುವುದು ಅಭಿವೃದ್ಧಿಗೆ ತೊಡಕಾಗಿದೆ. ಈ ಭಾಗವನ್ನು ಕೇವಲ ಕುರುಚಲು ಗಿಡ ಮತ್ತು ಗಟ್ಟಿ ಕಲ್ಲು ಇರುವುದರಿಂದ ಮೀಸಲು ಅರಣ್ಯದಿಂದ ಬೇರ್ಪಡಿಸಿ ಪ್ರತ್ಯೇಕ ಮಾಡಬೇಕು ಎಂದು ಅರಣ್ಯ ಸಚಿವ ರಮಾನಾಥ ರೈಯವರಿಗೆ ಈಗಾಗಲೇ ಮನವಿ ನೀಡಲಾಗಿದ್ದು ಸಚಿವರು ಸೂಕ್ತವಾಗಿ ಸ್ಪಂಧಿಸಿದ್ದಾರೆ. ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಧನಂಜಯ ಅವರಿಗೂ ಮನವಿ ಮಾಡಲಾಗಿದ್ದು ಸೂಕ್ತ ಸ್ಪಂಧನೆ ದೊರೆಯುವ ಭರವಸೆ ಇದೆ.
*ರಿಯಾಜ್ ಅಹಮ್ಮದ್, ಅಧ್ಯಕ್ಷರು, ಸೌಖ್ಯ ಶಿಕ್ಷಣ ಸಂಸ್ಥೆಗಳು. ಭಟ್ಕಳ ಹಾಗೂ ಬೈಂದೂರು.