ಭಟ್ಕಳ: ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯಾರ್ಥಿ ಪದ್ಮನಾಭ ಪೂಜಾರಿ ಹೇಳಿದರು.
ಅವರು ರವಿವಾರ ಭಟ್ಕಳದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೇಸ್ ಪಕ್ಷವು ಯಾವತ್ತೂ ದ್ವೇಷವನ್ನು ಸಾಧಿಸಿಲ್ಲ. ಇದು ಪ್ರೀತಿಯ ಸಂದೇಶ ಸಾರುವುದರ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸುವ ಕನಸು ಕಾಣುತ್ತಿದೆ. ಸಮಾಜದಲ್ಲಿರುವ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ದೇಶಕಟ್ಟುವ ಪ್ರಯತ್ನದಲ್ಲಿದೆ ಎಂದರು. ಉ.ಕ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಸಂಸದರಿದ್ದು ಯಾವುದೇ ಪ್ರಯೋಜವಾಗಿಲ್ಲ. ಇಲ್ಲಿನ ರಸ್ತೆಗಳನ್ನು ಕಂಡರೆ ಇಲ್ಲಿ ಒಂದಿಂಚೂ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದ ಅವರು, ಈ ಮೂವತ್ತು ವರ್ಷಗಳಲ್ಲಿ ಸಂವಿಧಾನವನ್ನು ವಿರೋಧಿಸುತ್ತ, ಧರ್ಮ, ಜಾತಿಗಳ ನಡುವೆ ಕಂದಕವನ್ನುಂಟು ಮಾಡುವ ಕೆಲಸ ಮಾಡಿದ್ದು ಬಿಟ್ಟರೆ, ಅಭಿವೃದ್ಧಿಯ ವಿಷಯದಲ್ಲಿ ಪ್ರಶ್ನೆಗಳನ್ನು ಕೇಳಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ ಎಂದು ಪರೋಕ್ಷವಾಗಿ ಅನಂತ್ ಕುಮಾರ್ ಹೆಗಡೆಯವರ ಹೆಸರು ಉಲ್ಲೇಖಿಸಿದೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಕಳೆದ ಎರಡು ದಿನಗಳಿಂದ ಉ.ಕ ಲೋ.ಸ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಜನರ ಬದುಕು, ಇಲ್ಲಿನ ಹಳ್ಳಿಗಾಡು ಪ್ರದೇಶ, ಇಲ್ಲಿನ ಪರಿಸ್ಥಿತಿ ಕಂಡರೆ ನನಗೆ ದುಖಃ ಮತ್ತು ಬೇಸರವಾಗುತ್ತಿದೆ. ಈ ಜಿಲ್ಲೆ ಇಷ್ಟೊಂದು ಹಿಂದೆ ಬೀಳಲು ಯಾರು ಕಾರಣರು? ಕಳೆದ ೩೦ ವರ್ಷಗಳಿಂದ ಇಲ್ಲಿ ಸಂಸದರಾಗಿದ್ದವರು ಹಾಗೂ ಅವರ ಪಕ್ಷವೇ ಇದಕ್ಕೆ ನೇರ ಹೊಣೆಯಾಗಿದೆ ಎಂದ ಅವರು, ಸಧ್ಯ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೇಸ್ ಪಕ್ಷದ ಪರವಾದ ಗಾಳಿ ಬೀಸುತ್ತಿದೆ. ದೇಶದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೇಸ್ ಮುಖಂಡ ಉದಯಕುಮಾರ್ ಶೆಟ್ಟಿ, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಮಾತನಡಿದರು.
ಕಾಂಗ್ರೇಸ್ ಪಕ್ಷದ ಮುಖಂಡರಾದ ಗೋಪಾಲ್ ನಾಯ್ಕ, ಈಶ್ವರ ಮೊಗೇರ್, ಸುರೇಶ್ ನಾಯ್ಕ, ಮಂಜಪ್ಪ ನಾಯ್ಕ, ರಮೇಶ್ ನಾಯ್ಕ, ದೇವಿದಾಸ್ ಆಚಾರಿ ಸುಧಾಕರ್ ನಾಯ್ಕ ಮತ್ತಿತರರು ಇದ್ದರು.