ಭಟ್ಕಳ: ಭೀಕರ ರಸ್ತೆ ಅಪಘಾತ;ಲಾರಿಯಡಿ ಅಪ್ಪಚ್ಚಿಯಾದ ಬೈಕ್ ಸವಾರ
ಭಟ್ಕಳ: ಇಲ್ಲಿನ ಶಮ್ಸುದ್ದಿನ್ ವೃತ್ತದ ಬಳಿ ಬುಧವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬ ಲಾರಿಯಡಿ ಅಪ್ಪಚ್ಚಿಯಾಗಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮದೀನಾ ಕಾಲೋನಿ ನಿವಾಸಿ ಇಬ್ರಾಹಿಂ ಶೇಖ್(75) ಎಂದು ಗುರುತಿಸಲಾಗಿದೆ.
ಇವರು ಮದೀನಾ ಕಾಲೋನಿಯಿಂದ ತಮ್ಮ ಸ್ಕೂಟರ್ ನಲ್ಲಿ ಬ್ಯಾಂಕ್ ಕಾರ್ಯಕ್ಕೆಂದು ಹೋಗುತ್ತಿದ್ದಾಗ ಕುಂದಾಪುರ ಕಡೆ ಹೋಗುತ್ತಿದ್ದ ಲಾರಿಯೊಂದು ಹಿಂಬದಿಯಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದ್ದು ಬೈಕ್ ನಿಂದ ಕೆಳಗೆ ಬಿದ್ದ ವ್ಯಕ್ತಿಯ ಮೇಲೆ ಹಿಂಬದಿಯ ಗಾಲಿ ಹರಿದು ಸ್ಥಳದಲ್ಲೇ ಸಾವಪನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ತಕ್ಷಣವೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು ಆತನಿಗಾಗಿ ಹುಡಕಾಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರಿಂದ ಕೆಲಸ ಸಮಯ ಹೆದ್ದಾರಿ ಪ್ರಯಾಣದಲ್ಲಿ ವ್ಯತ್ಯಯಾ ಉಂಟಾಗಿತ್ತು.
ಮೃತ ಇಬ್ರಾಹಿಂ ಶೇಖ್ ಕಾರವಾರ ಮೂಲದವರಾಗಿದ್ದು ಕಳೆದ 40 ವರ್ಷಗಳಿಂದ ಭಟ್ಕಳದಲ್ಲಿ ವಾಸವಾಗಿದ್ದಾರೆ. ಭಟ್ಕಳ ಲೋಕೋಪ ಇಲಾಖೆಯಲ್ಲಿ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸಿದ್ದು ಸದ್ಯ ನಿವೃತ್ತ ಜೀವನ ಸಾಗಿಸುತ್ತಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಇವರು ಅಗಲಿದ್ದಾರೆ.