ಭಟ್ಕಳ: ಸುಮಾರು 60ಸಾವಿರ ರೂ ಮೌಲ್ಯದ ಸಾಗುವಾನಿ ಮರದ ತುಂಡುಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿದ್ದು ಸಾಗುವಾನಿ ಕಳ್ಳರು ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಅರಣ್ಯ ಇಲಾಖೆಯ ಹೊನ್ನಾವರ ವಿಭಾಗದ ಭಟ್ಕಳ ವಲಯದ ಅರಣ್ಯ ಸಿಬ್ಬಂಧಿಗಳು ಬುಧವಾರ ರಾತ್ರಿ 1-00ಗಂಟೆಗೆ ಗಸ್ತಿನಲ್ಲಿರುವಾಗ ಶಿರಾಲಿ ಶಾಖೆಯ ಉತ್ತರಕೊಪ್ಪ ರಸ್ತೆಯ ಹತ್ತಿರ ಕಮಟಿಕೇರಿ, ಕಾಯ್ಕಿಣಿಯಲ್ಲಿ ಅಕ್ರಮವಾಗಿ ಸಾಗುವಾನಿ ಮರದಿಂದ ತಯಾರಿಸಿದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದರು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂಧಿಗಳನ್ನು ನೋಡಿದ ಕಳ್ಳರು ಮರದ ತುಂಡುಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೊನ್ನಾವರ ಉಪಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯ್ಕ, ಭಟ್ಕಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್, ವಲಯ ಸಂರಕ್ಷಣಾಧಿಕಾರಿ ಸವಿತಾ ಆರ್. ದೇವಾಡಿಗ, ಉಪವಲಯ ಅರಣ್ಯಾಧಿಕಾರಿ ಜಗದೀಶ ನಾಯ್ಕ ಶ್ರೀಕಾಂತ್ ಪವಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.