ಭಟ್ಕಳ: ಬೆಳೆ ರಕ್ಷಣೆ ಹಾಗೂ ಸ್ವರಕ್ಷಣೆಯ ಸಂಬಂಧ ಖರೀದಿಸಲಾಗಿದ್ದ ಬಂದೂಕುಗಳ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ನಕುಲ್ ನೆರವೇರಿಸಿದರು.
ತಾಲೂಕಿನಲ್ಲಿ ಒಟ್ಟೂ 240 ಜನರು ಬಂದೂಕುಗಳನ್ನು ಹೊಂದಿದ್ದು, ಇದರಲ್ಲಿ ಇಬ್ಬರು ಉದ್ಯಮಿಗಳು ಸ್ವರಕ್ಷಣೆಯ ಸಂಬಂಧ ಪಡೆದಿರುವ ಬಂದೂಕುಗಳು ಸೇರಿವೆ. ಶುಕ್ರವಾರ ಬೆಳಿಗ್ಗೆಯಿಂದಲೇ ರೈತರು ಜಿಲ್ಲಾಧಿಕಾರಿಗಳ ಆಗಮನದ ಹಿನ್ನೆಲೆಯಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಸೇರಿದ್ದರು. ಬಂದೂಕು ನವೀಕರಣದ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡ ಶ್ರೀಧರ ಹೆಬ್ಬಾರ, ಈ ಹಿಂದೆ ಯಾವುದೇ ಶುಲ್ಕವಿಲ್ಲದೇ ತಹಸೀಲ್ದಾರರೇ ಬಂದೂಕು ನವೀಕರಣ ಮಾಡಿಕೊಡುತ್ತಿದ್ದರು. ಆದರೆ ಈಗ ರು.1500 ರುಪಾಯಿ ಪಾವತಿಸಿ ಜಿಲ್ಲಾಧಿಕಾರಿಗಳಿಂದ ನವೀಕರಣ ಮಾಡಿಸಿಕೊಳ್ಳಬೇಕಾಗಿದೆ. ಇದು ರೈತರಿಗೆ ದುಬಾರಿಯಾಗಿದ್ದು, ಸರಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳು ಅರಣ್ಯ ಅತಿಕ್ರಮಣ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ವಿ.ಎನ್.ಬಾಡ್ಕರ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯನ್ನು ಭೇಟಿಯಾದ ತಂಝೀಮ್ ನಿಯೋಗ : ಭಟ್ಕಳ ಒಳಚರಂಡಿ ಸಮಸ್ಯೆ ಪರಿಹಾರದ ಕುರಿತಂತೆ ತಂಝೀಮ್ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ತಂಝೀಮ್ ಕಾರ್ಯದರ್ಶಿ ಆಲ್ತಾಫ್ ಖರೂರಿ, ಪುರಸಭಾ ಅಧ್ಯಕ್ಷ ಸಾದೀಕ್ ಮಟ್ಟಾ, ಫರ್ವೇಜ್, ಕೆ.ಎಮ್.ಆಶ್ಪಾಕ್, ಕೈಸರ್ ಮೊತೀಶಮ್, ಫಯಾಜ್ ಮೊದಲಾದವರು ಉಪಸ್ಥಿತರಿದ್ದರು.