ಕಾರವಾರ: ಜಿಲ್ಲೆಯಲ್ಲಿ 36.06 ಕೋಟಿ ರೂ ಬರ ಪರಿಹಾರ ಬಿಡುಗಡೆ

Source: S O News | By I.G. Bhatkali | Published on 15th May 2024, 8:22 PM | Coastal News |

ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಬರಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಜಿಲ್ಲೆಯ ರೈತರಿಗೆ ಇದುವರೆಗೆ ಒಟ್ಟು 36.06 ಕೋಟಿ ರೂ ಗಳ ಬರ ಪರಿಹಾರ ಮೊತ್ತವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು, ಈ ಪರಿಹಾರದ ಮೊತ್ತವು ಬೆಳೆ ಹಾನಿಯಿಂದ ಚಿಂತಾಕ್ರಾAತರಾಗಿದ್ದ ರೈತರ ಮೊಗದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. 

ಜಿಲ್ಲೆಯಲ್ಲಿ ಬರಪರಿಸ್ಥಿತಿ ತಲೆದೋರಿದ್ದ 11 ತಾಲೂಕುಗಳಲ್ಲಿ ನಡೆಸಿದ ಹಾನಿಯ ಸಮೀಕ್ಷೆಯನ್ವಯ ಬರದಿಂದ ಹಾನಿಗೊಳಗಾಗಿದ್ದ ಒಟ್ಟು 78,323 ರೈತರನ್ನು ಗುರುತಿಸಿ, ಯಾವುದೇ ಮಧ್ಯವರ್ತಿಗಳ ಹಾವಳಿಗೆ ಅವಕಾಶವಿಲ್ಲದೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಈ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿದೆ.

ಜಿಲ್ಲೆಯ ರೈತರಿಗೆ ಬರ ಪರಿಹಾರದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬ್ಯಾಂಕ್ ಖಾತೆಯ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲವು ರೈತರ ಖಾತೆಗಳಿಗೆ ಹಣ ಜಮೆ ಆಗಿಲ್ಲದಿರುವುದು ಕಂಡು ಬಂದಿದೆ. ಜಿಲ್ಲೆಯ ಯಾವುದೇ ಅರ್ಹ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಲಹಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ತಮ್ಮ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ನೊಂದಿಗೆ ಈ ಕೇಂದ್ರಗಳಿಗೆ ತೆರಳಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲಾ ಅರ್ಹ ರೈತರು ಬೆಳೆ ಪರಿಹಾರದ ಮೊತ್ತವನ್ನು ತಪ್ಪದೇ ಪಡೆಯಬೇಕು.
ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ

ಜಿಲ್ಲೆಯ ಬರ ಪೀಡಿತ ತಾಲೂಕುಗಳಲ್ಲಿ ಇದುವರೆಗೆ, ಕಾರವಾರದಲ್ಲಿ 1178 ರೈತರ ಬ್ಯಾಂಕ್ ಖಾತೆಗಳಿಗೆ ರೂ.29.97 ಲಕ್ಷ, ಜೋಯಿಡಾದ 2948 ರೈತರ ಬ್ಯಾಂಕ್ ಖಾತೆಗಳಿಗೆ ರೂ.130.98 ಲಕ್ಷ, ಹಳಿಯಾಳದ 15122 ರೈತರ ಬ್ಯಾಂಕ್ ಖಾತೆಗಳಿಗೆ ರೂ.1462.44 ಲಕ್ಷ, ಯಲ್ಲಾಪುರದ 3896 ರೈತರ ಬ್ಯಾಂಕ್ ಖಾತೆಗಳಿಗೆ ರೂ.179.29 ಲಕ್ಷ÷, ಮುಂಡಗೋಡನ 7734 ರೈತರ ಬ್ಯಾಂಕ್ ಖಾತೆಗಳಿಗೆ ರೂ.555.29 ಲಕ್ಷ, ಶಿರಸಿಯ 9802 ರೈತರ ಬ್ಯಾಂಕ್ ಖಾತೆಗಳಿಗೆ ರೂ.453.59 ಲಕ್ಷ, ಅಂಕೋಲದ 10942 ರೈತರ ಬ್ಯಾಂಕ್ ಖಾತೆಗಳಿಗೆ ರೂ.205.07 ಲಕ್ಷ, ಕುಮಟಾದ 8791ರೈತರ ಬ್ಯಾಂಕ್ ಖಾತೆಗಳಿಗೆ ರೂ.131.08 ಲಕ್ಷ, ಸಿದ್ದಾಪುರದ 10819ರೈತರ ಬ್ಯಾಂಕ್ ಖಾತೆಗಳಿಗೆ 311.32 ಲಕ್ಷ, ಭಟ್ಕಳದ 6451 ರೈತರ ಬ್ಯಾಂಕ್ ಖಾತೆಗಳಿಗೆ 88.84 ಲಕ್ಷ ಹಾಗೂ ದಾಂಡೇಲಿಯ 640 ರೈತರ ಬ್ಯಾಂಕ್ ಖಾತೆಗಳಿಗೆ 58.88 ಲಕ್ಷ ರೂ ಸೇರಿದಂತೆ ಒಟ್ಟು 3606.77 ಲಕ್ಷ ರೂ ಗಳನ್ನು ಜಿಲ್ಲೆಯ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಆದರೆ ಜಿಲ್ಲೆಯಲ್ಲಿ ಬೆಳೆ ಪರಿಹಾರದ ಮೊತ್ತವು ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ, ಆಧಾರ್ ಮ್ಯಾಪ್ ಆಗದೇ ಇರುವುದು, ಆಧಾರ್ ಸೀಡಿಂಗ್ ಸಮಸ್ಯೆ, ಹೆಸರುಗಳ ಮಿಸ್ ಮ್ಯಾಚ್, ಅಕೌಂಟ್ ಕ್ಲೋಸ್ ಆಗಿರುವುದು ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 5774 ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತವು ಇದುವರೆಗೆ ಜಮೆ ಆಗಿಲ್ಲದಿರುವುದು ಕಂಡು ಬಂದಿದೆ. ಈ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿನ ತಹಶೀಲ್ದಾರ್ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ತೆರೆಯುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಿದೆ.

ರೈತರ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಗಳಲ್ಲಿ 4000 ಕ್ಕೂ ಅಧಿಕ ಪ್ರಕರಣಗಳಲ್ಲಿ ಬ್ಯಾಂಕ್ ಗಳಲ್ಲಿ ಆಧಾರ್ ಸೀಡಿಂಗ್ ಆಗದೇ ಇರುವುದು, 1200 ಕ್ಕೂ ಅಧಿಕ ಪ್ರಕರಣಗಳಲ್ಲಿ ಪ್ರೂಟ್ಸ್ ತಂತ್ರಾAಶ ಮತ್ತು ಆಧಾರ್ ನಲ್ಲಿನ ಹೆಸರುಗಳ ಹೋಲಿಕೆಯಾಗದೇ ಇರುವುದು ಕಂಡು ಬಂದಿದೆ. ಈ ಸಮಸ್ಯೆ ಸೇರಿದಂತೆ ಇತರೇ ತಾಂತ್ರಿಕ ಸಮಸ್ಯೆಗಳನ್ನೂ ಕೂಡ ಬಗೆಹರಿಸಲು ಸಾಧ್ಯವಿದ್ದು, ರೈತರು ಕೂಡಲೇ ತಮ್ಮ ತಾಲೂಕಿನಲ್ಲಿನ ಸಲಹಾ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ, ಇವುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.

 

Read These Next

ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ...