ಭಟ್ಕಳ: ಗುತ್ತಿಗೆದಾರರಿಂದ ಪ್ರತಿಭಟನೆ ಅ.27ಕ್ಕೆ
ಭಟ್ಕಳ: 'ಜಿಲ್ಲೆಯಲ್ಲಿ ಸಿವಿಲ್ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ರಾಜ್ಯದ ಗಮನಸೆಳೆಯಲು ಅಕ್ಟೋಬರ್ 27ರಂದು ಕಾರವಾರದಲ್ಲಿ ಗುತ್ತಿಗೆದಾರರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದು ಭಟ್ಕಳ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ.ನಾಯ್ಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾತನಾಡಿದ ಅವರು, `ಜಿಲ್ಲೆಯಲ್ಲಿ ಟೆಂಡರ್ ಇಲ್ಲದೆ ಲ್ಯಾಂಡ್ ಅರ್ಮಿ ಹಾಗೂ ನಿರ್ಮಿತಿ ಕೇಂದ್ರಗಳಿಗೆ ಕಾಮಗಾರಿ ನೀಡಲಾಗುತ್ತಿದೆ. ಆದರೆ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ಕ್ರಮ ಅನುಸರಿಸಲಾಗುತ್ತಿದೆ. 5 ಲಕ್ಷಕ್ಕಿಂತ ದೊಡ್ಡ ದೊಡ್ಡ ಕೆಲಸಗಳನ್ನು ತುಂಡು ತುಂಡು ಮಾಡಿ ಯಾವುದೇ ಟೆಂಡರ್ ಕರೆಯದೇ ತಮ್ಮ ಬೆಂಬಲಿಗರಿಗೆ ನೀಡಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸಿವಿಲ್ ಗುತ್ತಿಗೆದಾರರ ಸಂಘದ ಪ್ರತಿನಿಧಿ ಕೆಂಪಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದರು.
ಸಂಘದ ಕಾರ್ಯದರ್ಶಿ ಸತೀಶಕುಮಾರ ನಾಯ್ಕ ಮಾತನಾಡಿ, ಕೋವಿಡ್ನಿಂದಾಗಿ ಎರಡು ವರ್ಷ ಗುತ್ತಿಗೆದಾರರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅನುದಾನವನ್ನು ಸರ್ಕಾರ ರೂಪಿಸಿದ ಮಾನದಂಡದ ಪ್ರಕಾರ ಕರೆಯದೇ ತಮಗಿಷ್ಟ ಬಂದವರಿಗೆ ಹಂಚಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಸುತ್ತಿಲ್ಲ. ಇಲಾಖೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅನುಸರಿಸುತ್ತಿಲ್ಲ. ಇದರ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಗುತ್ತಿಗೆದಾರರಾದ ಹಮೀದ್, ಅನಂತ ದೇವಾಡಿಗ, ಸುಲೇಮಾನ್, ಮೋಹನ ಮೊಗೇರ ಇದ್ದರು.