ಕೇಂದ್ರ ಸಚಿವ ಅನಂತ್ ಭಟ್ಕಳ ಭೇಟಿ
ಭಟ್ಕಳ: ಕೇಂದ್ರ ಸಚಿವ ಹಾಗೂ ಕೆನರಾ ಲೋಕಾಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಡಗೆ ಶನಿವಾರ ರಾತ್ರಿ ಭಟ್ಕಳಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳ ಪುರಸಭೆಯ ಅಂಗಡಿಗಳ ಸಮಸ್ಯೆ ಕಾನೂನಾತ್ಮಕ ಹಾಗೂ ಸೂಕ್ಷ್ಮ ವಿಷಯವಾಗಿದ್ದು ಇದನ್ನು ಕಾನೂನಿನ ಚೌಕಟ್ಟಿನೊಳಗೆ ಬಗೆಹರಿಸಬೇಕು ಎಂದರು.
ರಾಜ್ಯ ಸರ್ಕಾರ ವಿವಿಧ ಕಾರಣಗಳನ್ನು ಹುಡುಕಿ ಹಿಂದೂ ಸಂಘಟನೆಗಳ ಮುಖಂಡರನ್ನು ಬಂಧಿಸುತ್ತಿದೆ. ಜಗದೀಶ್ ಕಾರಂತ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಅಲ್ಲದೆ ಭಟ್ಕಳದ ಹಿಂದೂ ಮುಖಂಡರನ್ನು ಇತ್ತಿಚೆಗೆ ಪುರಸಭೆ ಅಂಗಡಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಬಂಧನವೂ ಸೇರಿದೆ ಎಂದ ಅವರು ನಾನು ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಮಾತನಾಡಿದ್ದೇನೆ. ಅಧಿಕಾರಿಗಳು ತಮ್ಮ ಚೌಕಟ್ಟನ್ನು ಮೀರುವದಿಲ್ಲ ಎಂಬ ಭರವಸೆ ನನಗಿದೆ. ಭಟ್ಕಳ ಒಂದೂ ಸೂಕ್ಷ್ಮ ಹಾಗೂ ಸಂಘರ್ಷದ ಪ್ರದೇಶವಾಗಿದ್ದು ಹಿಂದೂ ಮುಖಂಡರ ಬಂಧನದಿಂದ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ನಂತರ ಪುರಸಭೆ ಕಟ್ಟಡದೊಳಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೈದ ರಾಮಚಂದ್ರ ನಾಯ್ಕ ಹಾಗೂ ಪುರಸಭೆ ಕಲ್ಲುತೂರಾಟ ಪ್ರಕರಣದಲ್ಲಿ ಬಂಧಿತ ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಕೃಷ್ಣನಾಯ್ಕ ಆಸರಕೇರಿಯವರ ಮನೆಗೆ ಭೇಟಿ ಕುಟುಂಬ ವರ್ಗವನ್ನು ಸಂತೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಕಾಸ್ಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಭಟ್ಕಳ ಮಂಡಲ ಅಧ್ಯಕ್ಷ ರಾಜೇಶ್ ನಾಯ್ಕ, ಸುನಿಲ್ ನಾಯ್ಕ, ಪರಮೇಶ್ವರ ದೇವಾಡಿಗ, ಸುಬ್ರಾಯ ದೇವಾಡಿಗ, ಭಾಸ್ಕರ್ ದೈಮನೆ, ಮೋಹನ್ ನಾಯ್ಕ, ರವಿ ನಾಯ್ಕ ಜಾಲಿ, ಸಂತೋಷ್ ನಾಯ್ಕ ಮುರುಢೇಶ್ವರ, ದಿನೇಶ್ ನಾಯ್ಕ, ಪ್ರಮೋದ್ ಜೋಷಿ, ದಾಸ ನಾಯ್ಕ, ರಾಮಚಂದ್ರ ನಾಯ್ಕ ಬೇಂಗ್ರೆ, ಸಚಿನ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.