ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ, ರಿಕ್ಷಾ, ಟ್ಯಾಕ್ಟರ್ ಸಂಚಾರ ನಿಷೇಧ
ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಆ.1ರಿಂದ ದ್ವಿಚಕ್ರ, ಆಟೊರಿಕ್ಷಾ ಹಾಗೂ ಟ್ರ್ಯಾಕ್ಟರ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಈ ರಸ್ತೆ ಉದ್ಘಾಟನೆಯಾದ ಬಳಿಕ ಅಪಘಾತಗಳ ಸರಣಿ ನಡೆಯುತ್ತಲೇ ಇರುವ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ.1ರಿಂದಲೇ ದ್ವಿಚಕ್ರ, ತ್ರಿಚಕ್ರ ಹಾಗೂ ಟ್ರ್ಯಾಕ್ಟರ್ ವಾಹನಗಳ ಸಂಚಾರಕ್ಕೆ ನಿಷೇಧ ಹಾಕಿದ್ದು, ಸರ್ವಿಸ್ ರಸ್ತೆಯಲ್ಲೇ ಆ ವಾಹನಗಳು ಸಂಚಾರ ಮಾಡಬೇಕು ಎಂದು ಸೂಚಿಸಲಾಗಿದೆ. ಮೋಟಾರು ವಾಹನ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರವು ಜು.12ರಂದೇ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ದಶಪಥ ಹೆದ್ದಾರಿಯಲ್ಲಿ 80 ಕಿ.ಮೀ.ನಿಂದ 100 ಕಿ.ಮೀ.ವರೆಗೆ ವೇಗಮಿತಿಯಲ್ಲಿ ಚಲಿಸಲು ಅವಕಾಶ ಇರುವುದರಿಂದ ಅಪಘಾತ ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಈ ಕ್ರಮಕ್ಕೆ ಮುಂದಾಗಿದೆ.
ಆ.1ರಿಂದಲೇ ಹೆದ್ದಾರಿಯಲ್ಲಿ ಹೊಸ ನಿಯಮ ಅನ್ವಯವಾಗಲಿದ್ದು, ಬೈಕ್, ಆಟೊ, ಇ-ಕಾರ್ಟ್, ಮೋಟಾರ್ ರಹಿತ ವಾಹನಗಳು, ಟ್ರ್ಯಾಕ್ಟರ್ಗಳು, ಕೃಷಿ ಯಂತ್ರಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಕ್ವಾಡ್ರಿ ಸೈಕಲ್ಗಳು ಸಂಚರಿಸುವಂತಿಲ್ಲ. ಬದಲಿಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿ ಸಲಾಗಿದೆ. ನಿಯಮ ಉಲ್ಲಂಘಿಸಿ ಹೆದ್ದಾರಿ ಪ್ರವೇಶ ಮಾಡಿದರೆ ದುಬಾರಿ ಮೊತ್ತದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.