ಹೀಗೊಂದು ಅನುಮಾನ ವ್ಯಕ್ತಪಡಿಸಿದ ಸಚಿವ ಮಾಂಕಾಳ್ ವೈದ್ಯ
ಮುಂಡಗೋಡ: ಬೆಂಗಳೂರಿನ ಕೆಫೆಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಬಿಜೆಪಿಗರ ಕೈವಾಡ ಇರಬಹುದು ಎಂದು ಉ.ಕ.ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳ್ ಎಸ್.ವೈದ್ಯ ಅನುಮಾನ ಪಟ್ಟಿದ್ದಾರೆ.
ಅವರು ಮುಂಡಗೋಡದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಫೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಿಜೆಪಿಯ ಕೈವಾಡವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, ಬಿಜೆಪಿಗರು ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯಲು ಯಾವುದೇ ಹಂತಕ್ಕೆ ಹೋಗಬಹುದು ಎಂದರು.
ಇದನ್ನೆಲ್ಲಾ ಯಾವ ಪಕ್ಷ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದ ಮಂಕಾಳ್, ಯಾರೂ ಭಯಪಡುವ ಅಗತ್ಯವಿಲ್ಲ. ಇದನ್ನು ಯಾರೇ ಮಾಡಿರಲಿ , ನಮ್ಮ ಸರ್ಕಾರ ಖಂಡಿತಾ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.
ಬಿಜೆಪಿಯವರು ಸಾರ್ವಜನಿಕ ಅಭಿವೃದ್ಧಿ ಯೋಜನೆಗಳ ಬದಲು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿಯವರು ಇದುವರೆಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಬಡವರು ಮತ್ತು ಜನಸಾಮಾನ್ಯರಿಗಾಗಿ ಯಾವುದೇ ಯೋಜನೆಯೊಂದಿಗೆ ಬಿಜೆಪಿ ಎಂದಾದರೂ ಚುನಾವಣೆ ಎದುರಿಸಿದೆಯೇ? ಆ ಜನರು ಇವತ್ತಿನವರೆಗೂ ಅದನ್ನೇ (ಭಯ ಮತ್ತು ಭಯವನ್ನು ಹರಡುತ್ತಿದ್ದಾರೆ) ಮಾಡುತ್ತಿದ್ದಾರೆ ಮತ್ತು ಅವರು ಈ ಬಾರಿಯೂ ಅದೇ ಕೆಲಸವನ್ನು ಮಾಡಲು ಹೊರಟಿದ್ದಾರೆ ಎಂದು ಬಿಜೆಪಿಯವರ ಮೇಲೆ ಹರಿಹಾಯ್ದರು.
ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೊಳಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಂಕಾಳ್ ವೈದ್ಯ, ಕಾಂಗ್ರೆಸಿಗರು ದೇಶಭಕ್ತರು. ವಿಧಾನಸಭೆಯಲ್ಲಿ ಮಾತ್ರವಲ್ಲ, ಹೊರಗಡೆಯೂ ಇಂತಹ ಘೋಷಣೆಗಳನ್ನು ಕೂಗಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.