ಕಾರವಾರ : ಕೋವಿಡ್-19ರ ಲಾಕ್ಡೌನ್ ಘೋಷಿಸಿದ್ದರಿಂದ ಛಾಯಾಗ್ರಾಹಕ ವೃತ್ತಿ ನಡೆಸುವವರು ಸಂಕಷ್ಟಕ್ಕೀಡಾಗಿದ್ದು ಸರ್ಕಾರ ತಮ್ಮ ಬೇಡಿಕೆ ಈಡೇರಿಸಬೇಕೆಂದು ಉತ್ತರಕನ್ನಡ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದವರು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.
ಶುಕ್ರವಾರ ಕಾರವಾರ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರ ಮೂಲಕ ಮನವಿ ನೀಡಿದ ಛಾಯಾಗ್ರಾಹಕರು, ಕೋವಿಡ್ 19 ಹಿನ್ನಲೆಯಲ್ಲಿ 2020ರ ಅಂತ್ಯದವರೆಗೂ ಯಾವುದೇ ಮದುವೆ ಮತ್ತಿತರ ಕಾರ್ಯಕ್ರಮ ಸಿಗುವುದಿಲ್ಲ. ಹೀಗಾಗಿ ಬಾಡಿಗೆ, ಕುಟುಂಬದ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ, ವಿದ್ಯುತ್, ನೀರು, ಸಾಲದ ಹೊರೆ ಹೆಚ್ಚಾಗಿ ಜೀವನ ಕಷ್ಟಕರವಾಗಿದೆ.
ವೃತ್ತಿನಿರತ ಛಾಯಾಗ್ರಾಹಕರ ಕುಟುಂಬಗಳಿಗೆ ಆರೋಗ್ಯ ರಕ್ಷಣೆ, ಮಕ್ಕಳಿಗೆ ಆರ್.ಟಿ.ಇ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಇತ್ಯಾದಿ ನೆರವನ್ನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ತಕ್ಷಣ ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದ ಎಲ್ಲಾ ಫೋಟೋಗ್ರಫಿ ಉದ್ಯಮ ಬಂದ್ ಮಾಡಿ ಅಕ್ಟೋಬರ್ 31 ಶನಿವಾರದಂದು ಕರ್ನಾಟಕ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮನವಿಯಲ್ಲಿ ತಿಳಿಸಿದ ಬೇಡಿಕೆಗಳು:
1. ಕೋವಿಡ್-19 ಹಾಗೂ ನೆರೆ ಸಂತ್ರಸ್ತ ವೃತ್ತಿಬಾಂದವರಿಗೆ ಕೂಡಲೆ ವಿಶೇಷ ಪ್ಯಾಕೇಜ್ನ ನೆರವು ಘೋಷಿಸಬೇಕು.
2, ಅಸಂಘಟಿತ ಕಾರ್ಮಿಕ ವಲಯ 42ನೇ ವರ್ಗಕ್ಕೆ ಸೇರಿದ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ನೀಡುವುದು,
3, ರಾಜ್ಯದಲ್ಲಿ 151 ವರ್ಷಗಳ ಇತಿಹಾಸವಿರುವ ಛಾಯಾಗ್ರಹಣ ಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆ ಸಹಕಾರಗೊಳಿಸುವುದು,
4, ಕೆಪಿಎ ಛಾಯಾ ಭವನಕ್ಕೆ ನಿವೇಶನ ಒದಗಿಸುವುದು.
5. ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್ಗಳಿಂದ ಕಡಿಮೆ ಬಡ್ಡಿದರದಲ್ಲಿ
ಸಾಲ ಸೌಲಭ್ಯ ನೀಡುವುದು.
6, ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ
ಇನ್ನಿತರ ವಿಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರ ತೆಗೆಯುತ್ತಿರುವುದನ್ನು ಈ ಕೂಡಲೇ ನಿಷೇಧಿಸಲು ಆದೇಶವನ್ನು ಜಾರಿಗೊಳಿಸಬೇಕು.
7, ವೃತ್ತಿ ಭದ್ರತೆ: * ಸರ್ಕಾರಿ ಕೆಲಸಗಳಿಗೆ, ಸ್ಟುಡಿಯೋ ಪಾಸ್ಪೋರ್ಟ್ ತೆಗೆಯಲು ವೃತ್ತಿಪರರಿಗೆ ಆಧ್ಯತೆ ನೀಡಬೇಕು.
# ಸರ್ಕಾರದ ಮತದಾರರ ಗುರುತಿನ ಚೀಟಿ, ಆಧಾರ್, ಆರ್.ಟಿ.ಓ ಪಾಸ್ಪೋರ್ಟ್, ಸಬ್ ರಜಿಸ್ಟಾರ್ ಇತ್ಯಾದಿ ಕಛೇರಿಗಳಲ್ಲಿ ವೆಬ್ ಕ್ಯಾಮೆರಾಗಳಿಂದ ಛಾಯಾಚಿತ್ರ ತೆಗೆಯುವುದು ಈ ಕೂಡಲೇ ನಿಷೇಧಿಸಬೇಕು.ಪೂರ್ಣ ಪ್ರಮಾಣದ ಛಾಯಾಚಿತ್ರ ತೆಗೆಯುವ ಅವಕಾಶ ವೃತ್ತಿಪರರಿಗೆ ನೀಡಬೇಕು.
* ಸರ್ಕಾರದಿಂದ ಛಾಯಾಗ್ರಹಣಕ್ಕೆ ಸಂಬಂಧಿಸಿದ ಯಾವುದೇ ಗುತ್ತಿಗೆಗಳನ್ನು ವೃತ್ತಿ ನಿರತ ಛಾಯಾಗ್ರಾಹಕರಿಗೆ ನೀಡಬೇಕು.
* ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಚುನಾವಣೆಗಳಲ್ಲಿ ಛಾಯಾಗ್ರಹಣ ಸೇವೆ ಮಾಡಲು ಸಂಘದಿಂದ
ಗುರುತಿಸಲ್ಪಟ್ಟವರಿಗೆ ನೀಡಬೇಕು.
8, ಜೀವನ ಭದ್ರತೆ:
ಸರ್ಕಾರದಿಂದ ಆರೋಗ್ಯ ವಿಮೆ, ಅಪಘಾತ ವಿಮೆ, ಪರಿಕರಗಳ ವಿಮೆ ಹಾಗೂ ಜೀವ ವಿಮೆ ಯೋಜನೆಗಳನ್ನು
ನೀಡಬೇಕು,
* ಬಡ ವೃತ್ತಿನಿರತ ಛಾಯಾಗ್ರಾಹಕರಿಗೆ ಉಚಿತ ನಿವೇಶನ ನೀಡಬೇಕು.
* ಸರ್ಕಾರದಿಂದ ವೃತ್ತಿನಿರತ ಛಾಯಾಗ್ರಾಹಕರಿಗೆ ಪಿಂಚಣಿ ಯೋಜನೆ ನೀಡಬೇಕು.
* ಹಿರಿಯ ಪ್ರಬುದ್ಧ ವೃತ್ತಿ ಬಾಂಧವರಿಗೆ ರಾಜ್ಯೋತ್ಸವ ಹಾಗೂ ಲಲಿತಕಲಾ ಅಕಾಡೆಮಿ ಪ್ರಶಸ್ತಿ ನೀಡುವುದು.