ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ನಾಯ್ಕರಿಗೆ ಮನವಿ ಅರ್ಪಿಸಿದರು.
ಮನವಿ ಪತ್ರದಲ್ಲಿ “ಭಟ್ಕಳ ತಾಲೂಕಿನಲ್ಲಿ ಖಾಯಂ ಕಾರ್ಮಿಕ ನಿರೀಕ್ಷಕರು ನೇಮಕವಾಗಬೇಕು. ತಾಲೂಕಾ ಕಟ್ಟಡ ಕಾರ್ಮಿಕರ ವಿವಿಧ ರೀತಿಯ ಧನಸಹಾಯದ ಅರ್ಜಿಗಳು ಕಳೆದ ಐದು ವರ್ಷದಿಂದ ಮಂಜೂರಾಗದೇ ಇರುವುದರ ಬಗ್ಗೆ ಮತ್ತು ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಮಂಡಳಿಯಲ್ಲಿ ನೋಂದಣಿಯಾದ ಫಲಾನುಭವಿಗಳೆಲ್ಲರಿಗೂ 5000 ಸಹಾಯಧನ ಬಾರದೇ ಇರುವ ಬಗ್ಗೆ ಹಾಗೂ ಮೂರು ವರ್ಷ ಹಿಂದೆ ಸಲ್ಲಿಸಿರುವ ಶೈಕ್ಷಣಿಕ ಅರ್ಜಿಗಳು ನಿರೀಕ್ಷಕರ ಕಚೇರಿಯಲ್ಲಿ ಹಾಗೆಯೇ ಇರಿಸಿಕೊಂಡಿರುವ ಬಗ್ಗೆ ಹಾಗೂ ಎಲ್ಲಾ ರೀತಿಯ ಧನಸಹಾಯದ ಅರ್ಜಿಗಳಿಗೆ ಅರ್ಜಿ ಸಲ್ಲಿಸುವ ಕಾಲಮಿತಿ ಪರಿಗಣಿಸದೆ ಈ ವರ್ಷದ ಅಂತ್ಯದ ವರೆಗೂ ಅರ್ಜಿ ಸಲ್ಲಿಸಲು ಕಾಲಾವಧಿಯನ್ನು ನೀಡುವ ಕುರಿತು” ಆಗ್ರಹಿಸಲಾಗಿದೆ.
ಕಾರ್ಮಿಕ ಫಲಾನುಭವಿಗಳು ಮದುವೆ, ವೈದ್ಯಕೀಯ, ಹೆರಿಗೆ ಭತ್ಯೆ, ಪಿಂಚಣಿ, ಮರಣ ಮುಂತಾದ ಧನಸಹಾಯದ ಅರ್ಜಿಗಳು ನಾಲ್ಕೈದು ವರ್ಷದಿಂದ ಧನಸಹಾಯ ಬಾರದೆ ನಿರೀಕ್ಷಕರ ಕಚೇರಿಯಲ್ಲಿ ಬಾಕಿ ಉಳಿದಿರುತ್ತದೆ. ಅದರಂತೆ 2017-18 ಮತ್ತು 2018-19 ನೇ ಸಾಲಿನ ಶೈಕ್ಷಣಿಕ ಧನಸಹಾಯದ ಅರ್ಜಿಗಳು ಕಳೆದ ಮೂರು ವರ್ಷದಿಂದ ಮಂಜೂರಾತಿ ಅಧಿಕಾರಿಗೆ ಕಳುಹಿಸದೆ ಹಾಗೆಯೇ ಇರಿಸಿಕೊಂಡು ಆ ಶೈಕ್ಷಣಿಕ ಅರ್ಜಿಗಳಿಗೆ ಈಗ ಉದ್ಯೋಗ ಪ್ರಮಾಣ ಪತ್ರ ನೀಡಬೇಕು. ಕೇವಲ 7 ದಿನದ ಕಾಲಾವಧಿಯೊಳಗೆ ನೀಡಬೇಕು. ಇಲ್ಲವಾದರೆ ಅರ್ಜಿಯು ಪುರಸ್ಕರಿಸಲಾಗುವುದಿಲ್ಲವೆಂದು ಸೂಚನಾ ಪತ್ರದಲ್ಲಿ ತಿಳಿಸಿರುತ್ತಾರೆ. ವಾಸ್ತವಿಕ ವಿಷಯವೇನೆಂದರೆ 2017ಕ್ಕೆ ಸಲ್ಲಿಸಿದ ಶೈಕ್ಷಣಿಕ ಧನಸಹಾಯದ ಅರ್ಜಿಗಳಲ್ಲಿ ಉದ್ಯೋಗ ಪ್ರಮಾಣ ಪತ್ರವಿಲ್ಲದೆ ಬಹುತೇಕ ಫಲಾನುಭವಿಗಳಿಗೆ ಧನಸಹಾಯ ಮಂಜೂರಾಗಿದೆ. ಹೀಗಿರುವಾಗ ಆ ಸಮಯದಲ್ಲಿ ಸಲ್ಲಿಸಿರುವ ಶೈಕ್ಷಣಿಕ ಧನಸಹಾಯದ ಅರ್ಜಿಗಳಿಗೆ ಈಗ ಉದ್ಯೋಗ ಪ್ರಮಾಣ ಪತ್ರ ಕೇಳುವುದು ಸರಿಯೇ.? ಒಟ್ಟಾರೆ ನಿರೀಕ್ಷಕರ ಕಚೇರಿಯಲ್ಲಿಯೇ ಆಗಿರುವ ತಪ್ಪಿಗೆ ಬಡ ಕಾರ್ಮಿಕರು ಅನ್ಯಾಯಕ್ಕೊಳಗಾಗಿದ್ದಾರೆ. ಈ ಕೂಡಲೇ ನಿರೀಕ್ಷಕರ ಕಚೇರಿಯಲ್ಲಿ ಬಾಕಿ ಉಳಿದಿರುವ ಶೈಕ್ಷಣಿಕ ಅರ್ಜಿಯನ್ನು ತಕ್ಷಣ ಮಂಜೂರು ಮಾಡಬೇಕು ಇಲ್ಲವಾದರೆ ಬಡ ಕಾರ್ಮಿಕರು ತಮ್ಮ ಮಕ್ಕಳ ಶೈಕ್ಷಣಿಕ ಧನಸಹಾಯ ಸಿಗದೇ ವಂಚಿತರಾಗುತ್ತಾರೆ. ಅದರಲ್ಲಿಯೂ ಕೂಡ ಈಗ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಾರ್ಮಿಕರಿಗೆ 7 ದಿನದ ಒಳಗೆ ಉದ್ಯೋಗ ಪ್ರಮಾಣ ಪತ್ರ ನೀಡಬೇಕು ಇಲ್ಲವಾದರೆ ನಿಮ್ಮ ಅರ್ಜಿಯು ತಿರಸ್ಕøತ ವಾಗುತ್ತದೆ ಎಂದು ಸೂಚನಾ ಪತ್ರದಲ್ಲಿ ತಿಳಿಸಿರುತ್ತಾರೆ. 7 ದಿನದ ಒಳಗೆ ತಾಲೂಕಿನ ಕೆಲವು ಭಾಗದಲ್ಲಿ ಇವರು ಕಳಿಸಿರುವ ಸೂಚನಾ ಪತ್ರ ತಲುಪುವುದೇ ಇಲ್ಲಾ. ತಡವಾದರೆ ಅರ್ಜಿ ತಿರಸ್ಕೃತ ವಾಗುತ್ತದೆ ಎಂದು ಭಯಬೀತರಾಗಿ ಕಾರ್ಮಿಕರು ಯಾವುದೇ ರೀತಿಯ ವಾಹನ ಸೌಲಭ್ಯವಿಲ್ಲದೇ ಮತ್ತು ಕಾರ್ಮಿಕರಲ್ಲಿ ಸ್ವತಃ ವಾಹನ ಸೌಲಭ್ಯವಿಲ್ಲದೇ ಈಗ ಏಳು ದಿನದ ಒಳಗೆ ಉದ್ಯೋಗ ಪ್ರಮಾಣ ಪತ್ರ ಒದಗಿಸಲು ಕಾರ್ಮಿಕರಿಗೆ ಕಷ್ಟವಾಗುತ್ತದೆ. ಸಾಂಕ್ರಾಮಿಕ ರೋಗದ ಭಯದಿಂದ ಕಂಗಾಲಾಗಿರುವ ಕಾರ್ಮಿಕರು ಇಲಾಖೆ ಮಾಡಿದ ತಪ್ಪಿಗೆ ಕಷ್ಟ ಅನುಭವಿಸುವಂತಾಗಿದೆ . ಈ ಕೂಡಲೇ ಮೂರು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಅರ್ಜಿಗಳು ವಿಲೇವಾರಿ ಆಗಬೇಕು. ಇಲ್ಲವಾದರೆ ಕಾರ್ಮಿಕರು ಘೋರ ಅನ್ಯಾಯಕ್ಕೆ ಒಳಗಾಗುತ್ತಾರೆ.
ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ₹5000 ಸಹಾಯಧನ ಎಲ್ಲಾ ಕಾರ್ಮಿಕರಿಗೂ ಬಂದಿರುವುದಿಲ್ಲ. ಕೇವಲ ಅರ್ಧದಷ್ಟು ಕಾರ್ಮಿಕರಿಗೆ ಬಂದಿರುವಂತಹ ಮಾಹಿತಿ ಇದೆ. ಉಳಿದಂತಹ ಕಾರ್ಮಿಕರು ಸಹಾಯಧನ ಪಡೆಯದೆ ವಂಚಿತರಾಗಿದ್ದಾರೆ. ಆದ್ದರಿಂದ ಸದರಿ ಸಹಾಯ ಧನ ಪಡೆಯಲು ದಿನಾಂಕ 30/09/2020 ರವರೆಗೆ ಕಾಲಾವಧಿ ನೀಡಬೇಕು. ಇದರಿಂದ ಉಳಿದ ಕಾರ್ಮಿಕರಿಗೆ ಸಹಾಯಧನ ಪಡೆಯಲು ಅನುಕೂಲವಾಗುತ್ತದೆ.
ಕಳೆದ ಅಕ್ಟೋಬರ್ 2019 ರಿಂದ ಇಲ್ಲಿಯವರೆಗೂ ಕಾರ್ಮಿಕರು ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳು ಮತ್ತು ಹೊಸ ನೋಂದಣಿಗೆ ಸಲ್ಲಿಸಿರುವ ಅರ್ಜಿಗಳು ಇದುವರೆಗೂ ಅನುಮೋದನೆ ಆಗದೆ ಹಾಗೆಯೇ ಇರಿಸಿಕೊಂಡಿದ್ದಾರೆ. ಈ ಫಲಾನುಭವಿಗಳು ಮಂಡಳಿಯ ಯಾವುದೇ ಸೌಲಭ್ಯವೂ ಸಿಗದೆ ವಂಚಿತರಾಗಿದ್ದಾರೆ.
"ಸೇವಾ ಸಿಂಧು" (ಆನ್ಲೈನ್) ತಂತ್ರಾಂಶದಲ್ಲಿ ಸಲ್ಲಿಸಿರುವ ಅರ್ಜಿಗಳು ಏರಿಕೆ ಕ್ರಮದಲ್ಲಿ ಹಿರಿತನದಿಂದ (ಸಿನಿಯಾರಿಟಿ) ಅನುಮೋದನೆ ಆಗದೇ ಇತ್ತೀಚಿಗೆ ಸಲ್ಲಿಸಿರುವ ಅರ್ಜಿಗಳು ಮಧ್ಯ ಮಧ್ಯದಲ್ಲಿ ಅನುಮೋದನೆ ಆಗುತ್ತದೆ. ಇದರಿಂದ ಕಾರ್ಮಿಕರು ಸಕಾಲ ಸೌಲಭ್ಯದಡಿ ಅರ್ಜಿ ಸಲ್ಲಿಸಿದ್ದು, ತಮಗೆ ಧನಸಹಾಯ ಬಾರದೇ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎ.ಐ.ಟಿ.ಯು.ಸಿ) ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎನ್. ರೇವಣಕರ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ಉಪಾಧ್ಯಕ್ಷ ಮಹೇಶ್.ವೆಂಕಟ್ರಮಣ ಚಿತ್ರಾಪುರ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಸುನಿಲ್.ಎ.ರಾಯ್ಕರ್, ಹರಿ.ಓಂ. ಕಟ್ಟಡ ಕಾರ್ಮಿಕರ ಹಿತ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಗೋವರ್ಧನ್ .ಎಸ್. ನಾಯ್ಕ್, ಸಿ.ಐ.ಟಿ.ಯು ಭಟ್ಕಳ ತಾಲೂಕಾ ಅಧ್ಯಕ್ಷ ಪುಂಡಲಿಕ್ ನಾಯ್ಕ್, ಭಟ್ಕಳ ತಾಲೂಕಾ ಕೂಲಿಕಾರರ ಹಾಗೂ ಸಾಮಾನ್ಯ ವೃತ್ತಿ ನೌಕರರ ಸಂಘದ ವೆಂಕಟ್ರಮಣ. ಎಸ್. ಬಾಗಲ್ ಉಪಸ್ಥಿತರಿದ್ದರು.