ಉಗ್ಗಿನಕೇರಿ ಸರಕಾರಿ ಪ್ರೌಢಶಾಲೆಗೆ ಜಿಪಂ ಸಿಇಓ ಅನಿರೀಕ್ಷಿತ ಭೇಟಿ. ವಿದ್ಯಾರ್ಥಿಗಳೊಂದಿಗೆ ಸಂವಾದ, ತರಗತಿಗಳ ಪರಿಶೀಲನೆ.
ಧಾರವಾಡ : ಧಾರವಾಡ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಮಂಗಳವಾರ ಬೆಳಿಗ್ಗೆ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ತರಗತಿಗಳ ಪರಿಶೀಲನೆ ಮಾಡಿದರು.
ವಿವಿಧ ತರಗತಿಗಳಿಗೆ ತೆರಳಿ, ವಿದ್ಯಾರ್ಥಿಗಳೊಂದಿಗೆ ಪಾಠ, ಪಠ್ಯಕ್ರಮ, ಬೋಧನೆ ಕುರಿತು ಮಾಹಿತಿ ಪಡೆದರು. ಬಸ್ಗಳ ಕೊರತೆಯಿಂದ ಶಾಲೆಗೆ ಬರುವುದು ಮತ್ತು ಮರಳಿ ಹೊಗುವುದು ಕಷ್ಟವಾಗುತ್ತಿದೆ. ಹೆಚ್ಚಿನ ಬಸ್ ಸೌಕರ್ಯ ಕಲ್ಪಸಲು ವಿದ್ಯಾರ್ಥಿಗಳು ಸಿಇಓ ಅವರಿಗೆ ವಿನಂತಿಸಿದರು.
ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ ಬಗ್ಗೆ ಹೆಚ್ಚು ಒತ್ತು ಕೊಡಲು ಮತ್ತು ಪ್ರತಿದಿನ ಶಾಲಾ ಆವರಣ, ಆಟದ ಮೈದಾನ ಮತ್ತು ಶೌಚಾಲಯಗಳ ಸ್ವಚ್ಚತೆಗೆ ಗಮನಹರಿಸುವಂತೆ ಶಿಕ್ಷಕರಿಗೆ ಅವರು ಸೂಚಿಸಿದರು.
ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕೆಂದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಮನೋಭಾವ ಬೆಳೆಯುವಂತೆ ಪ್ರೋತ್ಸಾಹಿಸಬೇಕೆಂದು ಡಾ. ಬಿ.ಸುಶೀಲಾ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಲಘಟಗಿ ಕ್ಷೇತ್ರಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಉಗ್ಗಿನಕೇರಿ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಚಂದ್ರಶೇಖರ ಅಳಗವಾಡಿ, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.