ಹೋಮ್ ಕ್ವಾರೆಂಟೈನ್ನಲ್ಲಿದ್ದ ವ್ಯಕ್ತಿ ರಸ್ತೆ ಮೇಲೆ ಓಡಾಟ; ಜನರಲ್ಲಿ ಆತಂಕ
ಭಟ್ಕಳ: ಕೊರೊನಾ ವೈರಸ್ ಶಂಕೆಯಿಂದ ಹೋಮ್ ಕ್ವಾರೆಂಟೈನ್ನಲ್ಲಿ ಇದ್ದ ವ್ಯಕ್ತಿಯೋರ್ವ ಕಾರಿನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ತುರ್ತು ಸೇವೆಗೆ ಹೋಗುವವರು, ಔಷಧ ಅಂಗಡಿಯ ಎದುರು ಕಾಯುತ್ತಿದ್ದವರನ್ನು ಅನಾವಶ್ಯಕವಾಗಿ ಮುಟ್ಟಿ ಆತಂಕ ಸೃಷ್ಟಿಸಿದ ಘಟನೆ ಮಧ್ಯಾಹ್ನ 12.30ರ ಸುಮಾರಿಗೆ ನಗರದಲ್ಲಿ ಸಂಭವಿಸಿದೆ.
ವ್ಯಕ್ತಿಯನ್ನು ಹೆಬಳೆ ವ್ಯಾಪ್ತಿಯ ನಿವಾಸಿಯೆಂದು ಜನರು ಗುರುತಿಸಿದ್ದು ಈತನ ಬಲಗೈಯ ಮೇಲೆ ಸೀಲ್ ಹಾಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವೊಂದು ತುರ್ತು ಸಂದರ್ಭಗಳಲ್ಲಿ ಔಷಧವನ್ನು ವಿತರಿಸುವ ಸಲುವಾಗಿ ಅಂಗಡಿಯನ್ನು ಬಾಗಿಲು ತೆರೆದಿಟ್ಟುಕೊಂಡ ಸಂದರ್ಭದಲ್ಲಿ ತುರ್ತು ಅಗತ್ಯದ ಔಷಧವನ್ನು ಕೊಂಡು ಕೊಳ್ಳಲು ಕೆಲವರು ಬಂದಿದ್ದರೆನ್ನಲಾಗಿದೆ. ದೂರದೂರದಲ್ಲಿ ನಿಂತು ಔಷಧವನ್ನು ಕೊಂಡುಕೊಳ್ಳುವಲ್ಲಿ ಬಂದ ಈ ವ್ಯಕ್ತಿ ಕಾರಿನಿಂದ ಇಳಿದು ಅಲ್ಲಿರುವವರನ್ನೆಲ್ಲಾ ಮುಟ್ಟಿ ಅಷ್ಟೇ ವೇಗದಲ್ಲಿ ಪರಾರಿಯಾದ ಎನ್ನಲಾಗಿದೆ. ಈ ರೀತಿಯ ಕೃತ್ಯದಿಂದ ಜನರು ಕಂಗಾಲಾಗಿದ್ದು ಅಲ್ಲಿದ್ದವರೆಲ್ಲಾ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ತುರ್ತು ಔಷಧಿ ಕೊಡಬೇಕಾದ ಅಂಗಡಿಯವರೂ ಕೂಡಾ ಬಾಗಿಲು ಹಾಕಿಕೊಂಡ ಪ್ರಸಂಗ ನಡೆಯಿತು. ಒಟ್ಟಾರೆ ಹೋಮ್ ಕ್ವಾರೆಂಟೈನ್ನಲ್ಲಿರುವ ವ್ಯಕ್ತಿ ಕೇವಲ ಆತಂಕ ಸೃಷ್ಟಿಸಲೆಂದೇ ಬಂದಿರುವುದು ಆತನ ಕೃತ್ಯದಿಂದ ಸಾಬೀತಾದಂತಾಗಿದೆ. ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎನ್ನುವ ಮಾತು ಕೇಳಿ ಬಂದಿದ್ದು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸತ್ಯ ಎನೆನ್ನುವುದನ್ನು ಜನತೆಗೆ ತಿಳಿಸಬೇಕಾಗಿದೆ. ಇಂತಹ ಕಿಡಿಗೇಡಿ ಕೃತ್ಯ ಮಾಡುವವರ ಮೇಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.