ಕಾರವಾರ: ಅಂಕೋಲಾ ತಾಲ್ಲೂಕಿನ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ₹ 200 ಕೋಟಿ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಆದರೆ, ಈ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ನೀಡದೇ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಸಂಬಂಧ ಅಲಗೇರಿಯಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣದ ಜಾಗದಲ್ಲಿ ಶುಕ್ರವಾರ ಕೆಲವರು ಗದ್ದೆಗೆ ಇಳಿದು ಸಾಂಕೇತಿಕವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಸೂಕ್ತ ಪುನರ್ವಸತಿ ಹಾಗೂ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದರು.
ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿ ನೌಕಾಪಡೆಯ ವಿಮಾನ ನಿಲ್ದಾಣ ಕಾಮಗಾರಿ ನಡೆಯಲಿದೆ. ಅದನ್ನು ವಿಸ್ತರಿಸಿ ನಾಗರಿಕ ವಿಮಾನಯಾನ ಸೇವೆಗೂ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆ.ಎಸ್.ಐ.ಡಿ.ಸಿ) ಯೋಜನೆ ಸಿದ್ಧಗೊಳಿಸಿದೆ.
ಜಮೀನು ಕಳೆದುಕೊಳ್ಳುವವರಿಗೆ ಪುನರ್ವಸತಿಯ ಬಗ್ಗೆ ಮತ್ತು ಯೋಜನೆಗೆ ವಶವಾಗುವ ಜಮೀನು ಎಷ್ಟು ಎಂಬ ಕುರಿತು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ವಿನೋದ ಗಾಂವ್ಕರ್, ‘ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದೇವೆ. ಆಗ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಸ್ಥಳೀಯರ ಗಮನಕ್ಕೆ ತಾರದೇ ಜಮೀನು ವಶಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಈಗ ನೋಡಿದರೆ ಏಕಾಏಕಿ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರತಿ ಗುಂಟೆ ಜಮೀನಿಗೂ ತೀರಾ ಕಡಿಮೆ ಪರಿಹಾರ ಧನವನ್ನು ಉಲ್ಲೇಖಿಸಲಾಗಿದೆ. ಇದನ್ನು ಮೂರು ಪಟ್ಟು ಮಾಡದಿದ್ದರೆ ಜಮೀನು ಬಿಡಲು ಸಾಧ್ಯವೇ ಇಲ್ಲ’ ಎಂದು ಪ್ರಶ್ನಿಸಿದರು.
ಮತ್ತೊಬ್ಬ ಸ್ಥಳೀಯ ನಿವಾಸಿ ಶಿವಾನಂದ ಮಾತನಾಡಿ, ‘ವಿಮಾನ ನಿಲ್ದಾಣದ ಬಗ್ಗೆ ಜನರಿಗೆ ಮಾಹಿತಿ ಕೊಡುತ್ತಿಲ್ಲ. ಸೂಕ್ತ ಪುನರ್ವಸತಿ ಕಲ್ಪಿಸದೇ ಒಕ್ಕಲೆಬ್ಬಿಸಬಾರದು’ ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳ ಸಂತಸ: ಸರ್ಕಾರದ ನಿರ್ಧಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ ಬರಹಗಳನ್ನು ಹಂಚಿಕೊಂಡಿದ್ದಾರೆ.
‘ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ₹ 200 ಕೋಟಿ ಮಂಜೂರಾಗಿದೆ. ನನ್ನ ಆಗ್ರಹಕ್ಕೆ ಮನ್ನಣೆ ನೀಡಿ ಬೃಹತ್ ಯೋಜನೆಗೆ ಅನುಮೋದನೆ ನೀಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಕೂಡ ತಮ್ಮ ಫೇಸ್ಬುಕ್ ಖಾತೆಯಲ್ಲಿ, ‘ನನ್ನ ಒತ್ತಾಯಕ್ಕೆ ಬೆಲೆ ಕೊಟ್ಟು ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿಗೆ ಜನರ ಪರವಾಗಿ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
ಅಲಗೇರಿ ವಿಮಾನ ನಿಲ್ದಾಣ: ಅಂಕಿ ಅಂಶ
₹ 200 ಕೋಟಿ -ರಾಜ್ಯದಿಂದ ಮಂಜೂರಾದ ಮೊತ್ತ
₹ 27.84 ಕೋಟಿ -ಭೂ ಸ್ವಾಧೀನಕ್ಕೆ ಅಗತ್ಯ ಮೊತ್ತ
₹ 82 ಕೋಟಿ -ಕಾಮಗಾರಿಗೆ ಅಂದಾಜು ಮೊತ್ತ
97.10 ಎಕರೆ - ಬೇಕಾಗುವ ಒಟ್ಟು ಜಮೀನು
57.25 ಎಕರೆ -ರನ್ವೇ ನಿರ್ಮಾಣಕ್ಕೆ ಜಮೀನು
35 ಎಕರೆ- ಟರ್ಮಿನಲ್ ನಿರ್ಮಾಣಕ್ಕೆ ಜಮೀನು
4.85 ಎಕರೆ -ಸಂಪರ್ಕ ರಸ್ತೆಗೆ ಜಮೀನು