ಉಡುಪಿ : ‘ಗುಲ್ಶನ್’ 5 ರಿಂದ 12 ವಯಸ್ಸಿನ ಮಕ್ಕಳ ಸಂಘಟನೆ. ಮಕ್ಕಳನ್ನು ಜವಾಬ್ದಾರಿಯುತ ನಾಗರಿಕನಾಗಿ ದೇಶಸೇವೆಗೈಯುವ ಹಾಗೂ ಪ್ರತಿಯೊಬ್ಬ ದೇಶವಾಸಿಯ ಸೇವೆಗೈಯುವ ಸ್ಫೂರ್ತಿಯನ್ನು ಸಣ್ಣ ವಯಸ್ಸಿನಲ್ಲೇ ಬಿತ್ತುವ ಕಾಯಕವನ್ನು ವಿವಿಧ ಚಟುವಟಿಕೆಯ ಮೂಲಕ ಈ ಸಂಘಟನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಳೆದ ವಾರ "ತೋಟಗಾರಿಕಾ ಅಭಿಯಾನ"ವೊಂದನ್ನು ಹಮ್ಮಿಕೊಂಡಿತ್ತು.
ಅಭಿಯಾನದ ಪ್ರಯುಕ್ತ ಮರಗಳ ಸರ್ವೆ, ಪರಿಸರದಲ್ಲಿರುವ ಗಿಡಮರಗಳ ಪರಿಚಯ', ಎಲೆಗಳ ಕ್ರಾಫ್ಟ್, ಅದರ ಪ್ರಮುಖ ಗುಣಗಳು, ಪ್ರಾಮುಖ್ಯತೆಗಳು, ಅತ್ಯಂತ ಹಳೇಯ ಮರದೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸ್ಪರ್ಧೆ, ಡ್ರಾಯಿಂಗ್, ಮಿನಿ ಗಾರ್ಡನ್ ಹೀಗೆ ವಿವಿಧ ಸ್ಪರ್ಧೆಗಳ ಮೂಲಕ ಇದರ ಬಗ್ಗೆ ಜಾಗೃತಿಯನ್ನು ಉಂಟು ಮಾಡಲಾಯಿತು. ಉಡುಪಿ ಆಸುಪಾಸಿನ ಸುಮಾರು 70ಕ್ಕಿಂತಲೂ ಹೆಚ್ಚಿನ ಮಕ್ಕಳು ಹಾಗು ಪೋಷಕರು ಇದರಲ್ಲಿ ಪಾಲ್ಗೊಂಡರು.
ಇದರ ಸಮಾರೋಪ ಸಮಾರಂಭವು ಉಡುಪಿ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಉಡುಪಿ ವಲಯದ ಡೆಪ್ಯುಟಿ ಅರಣ್ಯಾಧಿಕಾರಿ ಶ್ರೀ ಜೀವನ ಶೆಟ್ಟಿ ಭಾಗವಹಿಸಿದರು. ಅರಣ್ಯ ಸಂಪತ್ತು, ನೀರು, ಮರಗಿಡಗಳ ಪ್ರಾಮುಖ್ಯತೆ ಈ ವಿಷಯಗಳ ಕುರಿತು ಪೋಷಕರು ಮತ್ತು ಮಕ್ಕಳಿಗೆ ಅತ್ಯಂತ ಮನೋಜ್ಞವಾಗಿ ವಿವರಿಸಿದರು. ಮಣಿಪಾಲ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೋಫೆಸರ್ ಡಾ| ಅಬ್ದುಲ್ ಅಝೀಝ್, ಮುಸ್ಲಿಮ್ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದಭೋರ್ಚಿತವಾಗಿ ಮಾತನಾಡಿದರು. ವಿಜೇತ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನವಾಗಿ ಗಿಡಗಳನ್ನು ನೀಡಲಾಯಿತು. ಶಾಹಿದಾ ರಿಯಾಝ್ ಅತಿಥಿಗಳನ್ನು ಸ್ವಾಗತಿಸಿದರು. ಅಭಿಯಾನದ ಸಂಚಾಲಕಿ ಮೆಹರನ್ನಿಸಾ ಪ್ರಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಸುರಯ್ಯಾ ಅವರು ಧನ್ಯವಾದವಿತ್ತರು.