ಉಡುಪಿ: ಠಾಣೆಯಲ್ಲೇ ರಾಜಿನಾಪತ್ರ ಬರೆದು ಮನೆಗೆ ತೆರಳಿದ ಪಿ.ಎಸ್.ಐ ಮಹಾಬಲ ಶೆಟ್ಟಿ
ಉಡುಪಿ: ತನ್ನ ಮೇಲಾಧಿಕಾರಿಗಳು ಕಿರುಕುಳ ನಿಡುತ್ತಿದ್ದಾರೆಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹಾಬಲ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ರಾಜಿನಾಮೆ ಬರೆದು ಮನೆಗೆ ತೆರಳಿದ ಘಟನೆ ಶುಕ್ರವಾರ ನಡೆದಿದೆ.
ಕಳ್ತೂರು ಸಂತೆಕಟ್ಟೆಯಲ್ಲಿ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದು ಗುರುವಾರ ಹೆಬ್ರಿ ಠಾಣೆಯಲ್ಲಿ ದಾಖಲಾಗಿದ್ದು, ಇದೇ ಪ್ರಕರಣದ ಇನ್ನೊಂದು ಕಡೆಯವರು ಶುಕ್ರವಾರ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಹೆಬ್ರಿ ಪೊಲೀಸರ ಬಗ್ಗೆ ದೂರು ನೀಡಿದ್ದಾರೆನ್ನಲಾಗಿದೆ. ಈ ವಿಚಾರವಾಗಿ ಮೇಲಾಧಿಕಾರಿಗಳು ಠಾಣಾಧಿಕಾರಿಯವನ್ನು ಕರೆಸಿ ವಿಚಾರಿಸಿದ್ದಾರೆನ್ನಲಾಗಿದೆ.
ಬಳಿಕ ಠಾಣೆಗೆ ಆಗಮಿಸಿದ ಮಹಾಬಲ ಶೆಟ್ಟಿ, ರಾಜಕೀಯ ಪ್ರಭಾವದಿಂದ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಠಾಣೆಯ ಡೈರಿ ಯಲ್ಲಿ ರಾಜೀನಾಮೆ ಬರೆದಿದ್ದು, ಬಳಿಕ ತನ್ನ ಮೊಬೈಲ್ನ್ನು ಟೇಬಲ್ ಮೇಲೆ ಇಟ್ಟು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅವರು ರಾಜೀ ನಾಮೆ ಪತ್ರವನ್ನು ಮಂಗಳೂರು ಪಶ್ಟಿಮ ವಲಯ ಐಜಿಪಿ ಹಾಗೂ ಇತರ ಅಧಿಕಾರಿಗಳಿಗೂ ಕಳುಹಿಸಿದ್ದಾರೆನ್ನಲಾಗಿದೆ.
ಠಾಣೆಯಿಂದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ತನ್ನ ಮನೆಗೆ ತೆರಳಿದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಂತರ ಮೇಲಾಧಿಕಾರಿಗಳು ಇವರ ಬಗ್ಗೆ ಮಾಹಿತಿ ಕಲೆಹಾಕಿ, ಮನೆಗೆ ತೆರಳಿ ಮನವೊಲಿಸಿ ಠಾಣೆಗೆ ಬರುವಂತೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಹಾಬಲ ಶೆಟ್ಟಿ ವಿಧಾನಸಭಾ ಚುನಾವಣೆಗೆ ಮೊದಲು ಹೆಬ್ರಿ ಠಾಣೆ ಉಪನಿರೀಕ್ಷಕರಾಗಿ ಭಡ್ತಿ ಹೊಂದಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಅಮಾಸೆಬೈಲು ಠಾಣೆಯಲ್ಲಿ ಎಎಸ್ಸೈ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಇನ್ನು ಎರಡು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ.