ಟಿಪ್ಪು ಸುಲ್ತಾನ್ ಮಾನವ ಹಕ್ಕುಗಳ ಸಂರಕ್ಷನಾಗಿದ್ದ-ಮೌಲಾನ ಇಕ್ಬಾಲ್ ನಾಯ್ತೆ
ಭಟ್ಕಳ :ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತ ಮಾನವ ಹಕ್ಕುಗಳನ್ನು ಸಂರಕ್ಷಣೆಯನ್ನು ಮಾಡುತ್ತಿದ್ದ ಎಂದು ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ಮುಹಮ್ಮದ್ ಇಕ್ಬಾಲ್ ನಾಯ್ತೆ ನದ್ವಿ ಹೇಳಿದರು.
ಅವರು ಶನಿವಾರ ನವಾಯತ್ ಕಾಲೋನಿಯ ಖುಷ್ ಹಾಲ್ ಶಾದಿ ಮಹಲ್ ನಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್, ಪುರಸಭೆ, ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಟಿಪ್ಪುವಿನ ಆಳ್ವಿಕೆಯಲ್ಲಿ ಹಿಂದು-ಮುಸ್ಲಿಮರು ಪರಸ್ಪರ ಸಹೋದರತೆಯಿಂದ ಬಾಳುತ್ತಿದ್ದರು. ನಿಮ್ನವರ್ಗದ ಏಳಿಗೆಗಾಗಿ ಶ್ರಮಿಸುತ್ತಿದ್ದ ಟಿಪ್ಪು ಮತಾಂಧನಾಗಿರದೆ ಪರಧರ್ಮ ಸಂಹಿಷ್ಟುವಾಗಿದ್ದ, ರಾಜ್ಯದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾನೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಟಿಪ್ಪು ಜಯಂತಿ ಆಚರಣೆಯನ್ನು ನಾವಿಂದು ಧರ್ಮ, ಜಾತಿ, ಭಾಷೆಯನ್ನು ಮರೆತು ಒಂದೇ ವೇದಿಕೆಯಲ್ಲಿ ಕುಳಿತು ಆಚರಿಸುತ್ತಿದ್ದೇವೆ. ನಾವೆಲ್ಲರೂ ಭಾರತೀಯರು ಎಂಬ ಪ್ರಜ್ಞೆ ನಮ್ಮಲ್ಲಿ ಬೆಳೆಸಿಕೊಂಡಾಗ ಮಾತ್ರ ದೇಶ ಅಭಿವೃಧ್ಧಿ ಕಾಣಲು ಸಾಧ್ಯವಾಗುತ್ತದೆ. ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮವಾಗಿದ್ದು ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು, ಹಲವಾರು ವರ್ಷದಿಂದ ಅನೇಕ ಗಣ್ಯರ ಜಯಂತಿಯನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ಅದರಲ್ಲೂ ಟಿಪ್ಪು ಒಬ್ಬ ಮಹಾನ್ ವ್ಯಕ್ತಿ. ಬ್ರಿಟಿಷರ ವಿರುದ್ಧ ಹೋರಾಡಿ ಉತ್ತಮ ಆಡಳಿತವನ್ನು ನಡೆಸಿದ ಇಂತಹ ಮಾಹಾನ್ ವ್ಯಕ್ತಿಯ ಜಯಂತಿಯನ್ನು ತುಂಬಾ ಸಂತೋಷದಿಂದ ಇಂದು ನಾವು ಆಚರಿಸುತ್ತಿದ್ದೇವೆ. ಟಿಪ್ಪು ಜಯಂತಿಯ ಕಾರ್ಯಕ್ರಮ ವನ್ನು ಉದ್ಘಾಟಿಸಿರುವುದು ನನಗೆ ಸಂತೋಷ ತಂದಿದೆ ಎಂದರು.
ಟಿಪ್ಪುವಿನ ಕುರಿತಾಗಿ ಉಪನ್ಯಾಸ ನೀಡಿದ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಶ್ರೀಪಾದ ಶೆಟ್ಟಿ ಮಾತನಾಡಿ, ಅರಸೊತ್ತಿಗೆ ಎಂದರೆ ಗುಲಾಬಿ ಹೂವಿನ ಹಾಸಿಗೆ ಮೇಲೆ ಮಲಾಗಿರುವವರಲ್ಲ. ಅಂದರೆ ಅದು ಮುಳ್ಳುಗಳ ಮಂಚ ಅಂತಹ ಪ್ರದೇಶದಲ್ಲಿ ಬಂದು ಟಿಪ್ಪು ಉತ್ತಮ ಕೆಲಸಗಳನ್ನು ಮಾಡಿದ್ದಾನೆ. ಟಿಪ್ಪು ಒಬ್ಬ ಮಹಾನ್ ವ್ಯಕ್ತಿಯಾಗಿದ್ದು. ನಾವೆಲ್ಲ ಟಿಪ್ಪುವಿನಲ್ಲಿರುವ ಒಳ್ಳೆತನಗಳನ್ನು ಅಳವಡಿಸಿಕೊಳ್ಳುವಲ್ಲಿ ಗಮನ ಹರಿಸಬೇಕು. ಟಿಪ್ಪುವಿನ ತಂದೆಯಾದ ಹೈದರಾಲಿ ಬೆಂಗಳೂರಿನ ಲಾಲ್ಬಾಗ್ ಕಟ್ಟಲು ಆರಂಭಿಸಿದರೆ ಟಿಪ್ಪು ಅದನ್ನು ಪೂರ್ಣ ಗೊಳಿಸುವ ಕಾರ್ಯಮಾಡುತ್ತಾನೆ ಎಂದ ಅವರು, ‘ನರಿಯಾಗಿ ನೂರು ದಿನ ಬಾಳುವುದಕ್ಕಿಂತ ಹುಲಿಯಾಗಿ ಮೂರು ದಿನ ಬಾಳುವುದು ದೊಡ್ಡದು, ಆ ಕಾರಣಕ್ಕಾಗಿ ಮೂರು ದಿನ ಬಾಳಿದರೂ ಆತ ಬಾಳಿ ಬೆಳಗಿದ ದಿನಗಳು ಇವತ್ತಿಗೂ ಒಂದು ಚರಿತ್ರೆಯಾಗಿ ಉಳಿದಿದೆ. ಒಬ್ಬ ವ್ಯಕ್ತಿಯಾದವನು ನ್ಯಾಯದ ಹಾದಿಯನ್ನು ಬಿಟ್ಟುಹೋಗಬಾರದು. ಅದು ಎಲ್ಲಾ ಧರ್ಮದವರಿಗೂ ಅನ್ವಯಿಸುತ್ತದೆ. ನೀನು ನಿನ್ನ ಮನಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಬೇಕು’ ಎಂದರು.
ಈ ಸಂದರ್ಭದಲ್ಲಿ ಟಿಪ್ಪುವಿನ ಕುರಿತು ಪ್ರಬಂದ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಸಾಜೀದ್ ಅಹ್ಮಮದ್ ಮುಲ್ಲಾ, ತಹಶಿಲ್ದಾರ ವಿ.ಎನ್.ಬಾಡಕರ, ಪೊಲೀಸ್ ಉಪ ಅಧೀಕ್ಷಕ ವೆಲೈಂಟೆನ್ ಡಿಸೋಜಾ, ಪುರಸಭೆ ಅಧ್ಯಕ್ಷ ಮೊಹಮ್ಮದ ಸಾಧಿಕ ಮಟ್ಟಾ, ಜಿ.ಪಂ.ಸದಸ್ಯೆ ಸಿಂದು ಭಾಸ್ಕರ ನಾಯ್ಕ, ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷ ಆದಂ ಪಣಂಬೂರು. ಕಾರ್ಯನಿರ್ವಾಹಕ ಅಧಿಕಾರಿ ಜೆ.ಡಿ.ಮುರಗೋಡು, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರೀ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ ಖರೂರಿ. ಮುಂತಾದವರು ಉಪಸ್ಥಿತರಿದ್ದರು.