ಭಟ್ಕಳ: ಇಲ್ಲಿನ ಮದೀನಾ ಕಾಲೋನಿಯ ಮದೀನಾ ಜಾಮಿಯಾ ಮಸೀದಿ ಬಳಿಯ ಸೈಯ್ಯದ್ ಅಮ್ಜದ್ ಬರ್ಮಾವರ್ ಎಂಬುವವರ ”ಅಲ್-ಇಮಾನ್’ ಎಂಬ ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ್ದು ಮನೆಯಲ್ಲಿ ಹಣ, ಆಭರಣಗಳು ಸಿಗದೆ ಬರಿಗೈಯಿಂದ ಮರಳಿದ್ದಾರೆ.
ಮನೆಯ ಮುಂಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯಲ್ಲಿರುವ ಬೀರುವನ್ನು ಮುರಿದಿದ್ದಾರೆ. ಅಲ್ಲಿ ಯಾವುದೇ ಬೆಲೆಬಾಳುವ ವಸ್ತು ಸಿಗದೆ ಇದ್ದಾಗ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಬರಿಗೈಯಿಂದ ಮರಳಿದ್ದಾರೆ.
ಮನೆಯ ಮಾಲಿಕ ಕಳೆದ ಒಂದು ತಿಂಗಳಿಂದ ದುಬೈಯಲ್ಲಿ ವಾಸಿಸುತ್ತಿದ್ದರು ಎನ್ನಾಗಿದ್ದು ಇಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದುಕೊಂಡಿದ್ದನ್ನು ಗಮನಿಸಿದ್ದಾರೆ. ಭಟ್ಕಳದಲ್ಲಿ ದಿನೆ ದಿನೆ ಕಳುವು ಪ್ರಕರಣ ಹೆಚ್ಚಾಗುತ್ತಿರುವುದನ್ನು ಅರಿತ ಅವರು ದುಬೈಗೆ ಹೋಗುವ ಸಂದರ್ಭದಲ್ಲಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತಮ್ಮ ಸಂಬಂಧಿಕರ ಬಳಿ ಇಟ್ಟುಹೋಗಿದ್ದರು ಎಂದು ಹೇಳಲಾಗುತ್ತಿದೆ.
ಸೈಯ್ಯದ್ ಮುಹಿದ್ದೀನ್ ಬರ್ಮಾವರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೂ ಇಲ್ಲಿನ ಹನೀಫಾಬಾದ್ ನಲ್ಲಿರುವ ಮುಝಮ್ಮಿಲ್ ಬರ್ಮಾವರ್ ಎನ್ನುವವರ ಮನೆಯು ಕಳುವುಗೈಯುವ ಪ್ರಯತ್ನ ಮಾಡಿದ್ದ ಕಳ್ಳರು ಅಲ್ಲಿಯೂ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೆ ಬರಿಗೈಯಿಂದ ಮರಳಿದ್ದರು.