• ವಯಕ್ತಿಕ ಕಾರಣಕ್ಕೆ ನೊಂದು ಆತ್ಮಹತ್ಯೆ
• ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟ ಅರ್ಚಕ
ಭಟ್ಕಳ: ಇಲ್ಲಿನ ಆಸರಕೇರಿಯಲ್ಲಿರುವ ನಾಮಧಾರಿ ಸಮಾಜದ ಇತಿಹಾಸ ಪ್ರಸಿದ್ಧ ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನದ ಅರ್ಚಕ ಗುರುವಾರ ರಾತ್ರಿ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಆಸರಕೇರಿ ದೇವಸ್ಥಾನದ ಹಿಂಬದಿಯಲ್ಲಿರುವ ಅರ್ಚಕನ ಮನೆಯಲ್ಲಿ ಜರಗಿದೆ.
ಆತ್ಮಹತ್ಯೆಗೆ ಶರಾಣದ ಅರ್ಚಕನನ್ನು ಶ್ರೀನಿವಾಸ್ ರಾಜು ಆಯ್ಯಂಗಾರ್(30) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಮಲಗುವ ಕೋಣೆಗೆ ಹೋದಾಗ ತಮ್ಮ ಪುತ್ರ ಶ್ರೀನಿವಾಸ್ ರಾಜು ಆಯ್ಯಂಗಾರ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದರು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತರ ತಂದೆಯೂ ಇದೇ ಮಂದಿರದಲ್ಲಿ ಅರ್ಚಕರಾಗಿದ್ದು ಅವರ ಮರಣ ನಂತರ ಪುತ್ರ ಶ್ರೀನಿವಾಸ್ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದರು ಎಂದು ತಿಳಿಬಂದಿದ್ದು ಉತ್ತಮ ಸ್ವಭಾವದ ಅತ್ಯಂತ ವಿನಯಶೀಲ ವ್ಯಕ್ತಿಯಾಗಿದ್ದ ಇವರು ಭಕ್ತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಯಾರೊಂದಿಗೂ ವೈರತ್ವ ಇರದ ಇವರು ಕೆಲ ವ್ಯಯಕ್ತಿಕ ಕಾರಣಗಳಿಂದಾಗಿ ಮಾನಸಿಕವಾಗಿ ನೊಂದುಕೊಂಡಿದ್ದರು ಎಂದು ಹೇಳಲಾಗಿದ್ದು ‘ನನ್ನ ಸಾವಿಗೆ ಯಾರೂ ಕಾರಣವಲ್ಲ ನಾನೆ ನನ್ನ ಸಾವಿಗೆ ಕಾರಣ’ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ತನ್ನ ತಾಯಿಯೊಂದಿಗೆ ಸಂತೋಷದಿಂದ ಮಾತನಾಡಿದ್ದು ಬೆಳಿಗ್ಗೆ ಮಗನ ಈ ಸ್ಥಿತಿಯನ್ನು ಕಂಡು ತಾಯಿ ಅಘಾತಕ್ಕೊಳಗಾಗಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.