ಶಿಡ್ಲಘಟ್ಟ: ಅಭಿವೃದ್ದಿ ನಿಗಮಗಳಲ್ಲಿ ಮದ್ಯವರ್ತಿಗಳ ಹಾವಳಿ ಶಾಸಕರ ಅಸಮಾಧಾನ
ಶಿಡ್ಲಘಟ್ಟ,ಸೆಪ್ಟೆಂಬರ್24: ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಗಳಲ್ಲಿ ಸರಕಾರದ ಸೌಲಭ್ಯಗಳನ್ನು ಕಲ್ಪಿಸುವುದಾಗಿ ನಂಬಿಸಿ ಮಧ್ಯವರ್ತಿಗಳು ಜನರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದು ಜನರು ಜಾಗೃತರಾಗಿ ಎಚ್ಚರವಹಿಸಬೇಕೆಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆ ಬಾವಿಗಳಿಗೆ ಅಳವಡಿಸಲು ಪಂಪು ಮೋಟಾರ್ ಕೇಬಲ್ ಪೈಪು ಇನ್ನಿತರೆ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
2011-12ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆ ಬಾವಿಗಳಿಗೆ ಮೊದಲ ಹಂತವಾಗಿ 51 ಮಂದಿಗೆ ಪಂಪು ಮೋಟಾರ್ನ್ನು ವಿತರಿಸಲಾಗುತ್ತಿದೆ ಇನ್ನುಳಿದ ಎಲ್ಲರಿಗೂ ಎರಡನೇ ಹಂತದಲ್ಲಿ ವಿತರಿಸಲಾಗುವುದು ಎಂದ ಅವರು ಈ ಮೊದಲು ಈ ಯೋಜನೆಯಡಿ ಒಂದೂವರೆ ಲಕ್ಷ ನೀಡುತ್ತಿದ್ದು ಇದೀಗ ನಾಲ್ಕು ಲಕ್ಷಕ್ಕೆ ಈ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಪಂಗಡದವರಿಗೆ ಈ ಎಲ್ಲ ಸೌಲಭ್ಯಗಳನ್ನು ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ವಿತರಿಸುತ್ತಿದ್ದು ಎಲ್ಲರೂ ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು ಶಿಕ್ಷಣ, ಆರೋಗ್ಯ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಮುಂದುವರೆಯುವ ಮೂಲಕ ಪರಿಶಿಷ್ಟ ಜಾತಿ ಪಂಗಡದವರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕೆಂದು ಬಯಸಿದರು.
51 ಮಂದಿಗೆ ಪಂಪು ಮೋಟಾರ್ ಕೇಬಲ್ ಸ್ಟಾಟರ್ ಪೈಪು ಇನ್ನಿತರೆ ಎಲ್ಲ ಪರಿಕರಗಳನ್ನು ವಿತರಿಸಲಾಯಿತು. ಗುತ್ತಿಗೆದಾರರಿಂದಲೆ ಎಲ್ಲ ಪರಿಕರಗಳನ್ನು ಸಾಮೂಹಿಕವಾಗಿ ಪ್ರವಾಸಿ ಮಂದಿರದ ಆವರಣದಲ್ಲಿ ಇಳಿಸಿ ಅಲ್ಲಿಂದ ಎಲ್ಲ ಫಲಾನುಭವಿಗಳಿಗೂ ಸಾಗಾಣಿಕೆ ಮಾಡಿಕೊಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ಮುನಿಯಪ್ಪ, ತನುಜಾರಘು, ನಗರಸಭೆ ಅಧ್ಯಕ್ಷ ಅಪ್ಸರ್ಪಾಷ, ನಗರಸಭಾ ಸದಸ್ಯರಾದ ಸುಹೇಲ್ ಅಹ್ಮದ್,ಹೆಚ್.ಎಸ್.ನಯಾಝ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನರಸಿಂಹಯ್ಯ, ತಾಪಂ ಸದಸ್ಯ ರಾಜಶೇಖರ್, ನಿಗಮದ ಅಧಿಕಾರಿ ಕಾಮಾಕ್ಷಿ, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವೆಂಕಟೇಶ್,ದ್ಯಾವಪ್ಪ,ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುಧ್ದಿಚಿತ್ರ,ಸೆಪ್ಟೆಂಬರ್24 ಎಸ್.ಡಿ.ಎಲ್.ಪಿ01 ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆ ಬಾವಿಗಳಿಗೆ ಅಳವಡಿಸಲು ಪಂಪು ಮೋಟಾರ್ ಕೇಬಲ್ ಪೈಪು ಇನ್ನಿತರೆ ಪರಿಕರಗಳನ್ನು ಫಲಾನುಭವಿಗಳಿಗೆ ಶಾಸಕ ಎಂ.ರಾಜಣ್ಣ ವಿತರಣೆ ಮಾಡಿದರು.