ಕಾರವಾರ: ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರವಿರುವ ಮಸ್ಜಿದ್-ಎ-ಫುರ್ಖಾನ್ ದಲ್ಲಿ ಈದ್-ಉಲ್-ಅಝಾ ನಿಮಿತ್ತ ಬೆಳಿಗ್ಗೆ 7.15 ಗಂಟೆಗೆ ಸರಿಯಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲಾನಾ ಅಬ್ದುಲ್ ಸಯೀದ್ ನಮಾಝನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಅವರು ಈದ್-ಉಲ್-ಅಝಾ ಹಬ್ಬವನ್ನು ನಾವು ಎಷ್ಟು ಸಡಗರ ಸಂಭ್ರಮದಿಂದ ಆಚರಿಸುತ್ತೇವೆಯೋ ಹಾಗೆಯೇ ದೇಶದ ಎಲ್ಲಡೆ ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಆಚರಿಸುವಂತೆ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ.
ದೇಶದಲ್ಲಿ ನಡೆಯುವ ಅನ್ಯಾಯ ಆತಂಕ ಹಾಗೂ ದೌರ್ಜನ್ಯದ ಸಂಪೂರ್ಣನಿವಾರಣೆಗಾಗಿ ಎಲ್ಲರೂ ಶುದ್ಧ ಮನಸ್ಸಿನಿಂದ ಪ್ರಾರ್ಥಿಸೋಣ ಎಂದು ಹೇಳಿದರು. ಮೌಲಾನಾ ಮುನೀರ್ ಮೊಹಮ್ಮದ್ ಶರೀಫ್ ಮಾತನಾಡಿ ಕೆಲವೊಂದು ಸಂದರ್ಭದಲ್ಲಿ ನಮಗಿಷ್ಟವಾದ ವಸ್ತುಗಳನ್ನು ತ್ಯಾಗ ಮಾಡುವ ಪರಿಸ್ಥಿತಿ ಬಂದಾಗ ಅದಕ್ಕಾಗಿ ಸಿದ್ಧರಿರಬೇಕು ಇದೇ ಹಬ್ಬದ ನಿಜವಾದ ಆಚರಣೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕರ್ನಾಟಕದ ಕೊಡಗು, ಮಡಿಕೇರಿ ಹಾಗೂ ಕೇರಳ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ತತ್ತರಿಸಿರುವ ಜನರ ಕ್ಷೇಮಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಜೊತೆಗೆ ಅಲ್ಲಿಯ ಜನರ ಪರಿಹಾರಕ್ಕಾಗಿ ಕೈಲಾದಷ್ಟು ಧನಸಹಾಯ ಮಾಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಮಸ್ಜಿದ್-ಎ-ಫುರ್ಖಾನ ಅಧ್ಯಕ್ಷರಾದ ಶೌಕತ್ ಶೇಖ್, ಮಾಜಿ ಅಧ್ಯಕ್ಷ ಮೊಹ್ಮಮದ್ ರಫೀಕ್ ಮಿರ್ಜಾನ್ಕರ್, ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರೂ ಆದ ನಜೀರ್ ಅಹಮದ್ ಯು.ಶೇಖ್, ವಕೀಲರಾದ ಎಸ್.ಎ.ಖಾಜಿ, ಡಾ|| ನಯೀಮ್ ಮುಕಾದಮ್, ನಿಜಾಮುದ್ದೀನ್ ಶೇಖ್, ಆದಮ್ ಇದ್ರೂಸ್ ಖಾನ್, ಫೈಸಲ್ ಮುಕಾದಮ್, ರಿಯಾಜ್ ಮಿರ್ಜಾನ್ಕರ್, ಅಬ್ದುಲ್ ರೆಹಮಾನ್, ರಾಷ್ಟ್ರಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್ ಶೇಖ್, ಅಖಿಲ್ ಖಾನ್. ಮೊಹಮ್ಮದ್ ಫೌಜಿ ಮಿರ್ಜಾನ್ಕರ್ ಮತ್ತು ಆಝಾದ್ ಯುಥ್ ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯರಿಗೂ ಪ್ರತ್ಯೇಕವಾದ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಪರದೆಯ ಒಳಗಿದ್ದು ಅವರೂ ಸಹ ಈದ್-ಉಲ್-ಅಝಾದ ನಮಾಝನ್ನು ನೆರವೇರಿಸಿದರು.