ಕೋಲಾರ: ಕೋಲಾರ ನಗರದ ತರಕಾರಿ ಮಾರ್ಕೆಟ್ನಲ್ಲಿ ಬಣ್ಣ ಮಿಶ್ರಿತ ಹಸಿ ಬಟಾಣಿ ಮಾರುತ್ತಿದ್ದು, ಮಾರಾಟಗಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರದ ಹೊಸ ಬಡಾವಣೆಯ ನಿವಾಸಿ ಸಂಪತ್ಕುಮಾರ್ ಒತ್ತಾಯಿಸಿದ್ದಾರೆ.
ಕಳೆದ ರಾತ್ರಿ ಮಾರುಕಟ್ಟೆಯಿಂದ ಸಿಪ್ಪೆ ಬಿಡಿಸಿಟ್ಟಿರುವ ಹಸಿ ಬಟಾಣಿಯನ್ನು ಖರೀದಿಸಲಾಗಿದ್ದು, ಅದನ್ನು ಮನೆಗೆ ತಂದು ಸಾಂಬಾರು ಮಾಡಲು ತೊಳೆದಾಗ ಅದರಲ್ಲಿರುವ ಬಣ್ಣ ಗೋಚರವಾಗಿದೆ. ಈ ಬಣ್ಣ ಹೊಟ್ಟೆ ಸೇರಿದರೆ ಕ್ಯಾನ್ಸರ್ ಮತ್ತು ಇತರೆ ಖಾಯಿಲೆಗಳಿಗೆ ತುತ್ತಾಗುವ ಸಂಭವವಿದ್ದು, ಆಹಾರ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ನಡೆಯುತ್ತಿರುವ ಬಣ್ಣಮಿಶ್ರಿತ ಕಲೆಬೆರಕೆ ಆಹಾರ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ಸಂಪತ್ ಕುಮಾರ್ ಮನವಿ ಮಾಡಿದ್ದಾರೆ.