ಹೊಸದಿಲ್ಲಿ: ಹರಿದ್ವಾರದಲ್ಲಿ ರವಿವಾರ ಹೆಲಿಕಾಪ್ಟರ್ ಹತ್ತುವ ಸಂದರ್ಭ ಕೆಳಗೆ ಜಾರಿ ಬಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲೀ ಗಾಯಗೊಂಡ ಘಟನೆ ನಡೆದಿದೆ.
ಹೆಲಿಕಾಪ್ಟರ್ನ ಹ್ಯಾಂಡಲ್ ಹಿಡಿದು ಒಳಹತ್ತುವ ಯತ್ನದಲ್ಲಿದ್ದಾಗ ಕೈಜಾರಿ ಜೇಟ್ಲೀ ಕೆಳಬಿದ್ದರು. ಸಚಿವರಿಗೆ ಅಲ್ಪಮಟ್ಟಿನ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಅವರು ದಿಲ್ಲಿಗೆ ಮರಳಿದರು ಎಂದು ಮೂಲಗಳು ತಿಳಿಸಿವೆ.
ಹರಿದ್ವಾರದಲ್ಲಿ ಬಾಬಾ ರಾಮ್ದೇವ್ ಅವರ ಪತಂಜಲಿ ಆಹಾರ ಮತ್ತು ಗಿಡಮೂಲಿಕೆ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೇಟ್ಲೀ, ಬಳಿಕ ದಿಲ್ಲಿಯಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದರು.
ಈ ಸಭೆಯಲ್ಲಿ ಉತ್ತರಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆಯ ಮುಖ್ಯಮಂತ್ರಿಗಳ ಆಯ್ಕೆ ಮಾಡುವ ನಿರೀಕ್ಷೆಯಿದೆ. ಜೊತೆಗೆ, ಗೋವಾದಲ್ಲಿ ಇತರ ಪಕ್ಷಗಳ ಬೆಂಬಲದಿಂದ ಸರಕಾರ ರಚಿಸುವ ಯತ್ನದಲ್ಲಿರುವ ಬಿಜೆಪಿ, ಮನೋಹರ್ ಪಾರಿಕ್ಕರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯಿದೆ.
ಮಣಿಪುರದಲ್ಲಿ ಕೂಡಾ ಇತರ ಪಕ್ಷಗಳ ನೆರವು ಪಡೆದು ಸರಕಾರ ರಚಿಸಲು ಬಿಜೆಪಿ ಭಾರೀ ಪ್ರಯತ್ನ ನಡೆಸುತ್ತಿದೆ.ಅರುಣ್ ಜೇಟ್ಲೀ ಸಂಸದೀಯ ಮಂಡಳಿಯ ಓರ್ವ ಪ್ರಮುಖ ಸದಸ್ಯರಾಗಿದ್ದಾರೆ.