ಹೊಸದಿಲ್ಲಿ: ಕಾರ್ಗಿಲ್ ಹುತಾತ್ಮರೊಬ್ಬರ ಪುತ್ರಿ ಗುರ್ಮೆಹರ್ ಕೌರ್ ಸುತ್ತ ಹರಡಿಕೊಂಡ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕ್ರಿಕೆಟಿಗ ಗೌತಮ್ ಗಂಭೀರ್ ವೀಡಿಯೋವೊಂದನ್ನು ಟ್ವೀಟ್ ಮಾಡಿ ಕೌರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು ನನಗೆ ನಿರಾಸೆ ತಂದಿದೆ, ಪ್ರತಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿರುವ ದೇಶ ಭಾರತವಾಗಿದೆ,’’ ಎಂದು ಗಂಭೀರ್ ಈ ವೀಡಿಯೋದಲ್ಲಿ ಹೇಳಿದ್ದಾರೆ. ಕೌರ್ ಅವರನ್ನು ಬೆಂಬಲಿಸುತ್ತಾ, ಹುತಾತ್ಮರೊಬ್ಬರ ಪುತ್ರಿ ಯುದ್ಧದ ಕ್ರೌರ್ಯಗಳ ಬಗ್ಗೆ ಟ್ವೀಟ್ ಮಾಡಿ ಶಾಂತಿಗಾಗಿ ಪ್ರಯತ್ನಿಸಿದರೆ, ಆಕೆಗೆ ಈ ನಿಟ್ಟಿನಲ್ಲಿ ಎಲ್ಲಾ ಹಕ್ಕುಗಳೂ ಇವೆ ಎಂದು ಗಂಭೀರ್ ಹೇಳಿದ್ದಾರೆ. ಕೌರ್ಳನ್ನು ಟೀಕಿಸಿದವರು ಹಾಗೂ ಅಣಕಿಸಿದವರ ವಿರುದ್ಧ ಕೆಂಡ ಕಾರಿದ ಗಂಭೀರ್ ಯಾರು ಎಷ್ಟು ದೇಶಭಕ್ತಿ ಹೊಂದಿದ್ದಾರೆಂದು ತೋರಿಸಿಕೊಳ್ಳುವ ಹಾಗೂ ಕೌರ್ ಅವರನ್ನು ಅಣಕಿಸಲು ಇರುವ ಅವಕಾಶ ಇದಲ್ಲ ಎಂದು ಹೇಳಿದ್ದಾರ್ತೆೀಚಿಗಿನ ರಾಮ್ಜಾಸ್ ಕಾಲೇಜು ಘಟನೆಯ ಬಳಿಕ ‘‘ನಾಟ್ ಅಫ್ರೇಡ್ ಆಫ್ ಎಬಿವಿಪಿ’’ ಹ್ಯಾಶ್ ಟ್ಯಾಗ್ ಜನಪ್ರಿಯಗೊಳಿಸಿದ್ದರು ಕೌರ್. ಇದಾದ ನಂತರ ಆಕೆಯ ಎಂಟು ತಿಂಗಳ ಹಿಂದಿನ ವೀಡಿಯೋವೊಂದರ ಸ್ಕ್ರೀನ್ ಶಾಟ್ - ಆಕೆ ಕೈಯ್ಯಲ್ಲಿ ‘‘ಪಾಕಿಸ್ತಾನ್ ಡಿಡ್ ನಾಟ್ ಕಿಲ್ ಮೈ ಫಾದರ್, ವಾರ್ ಡಿಡ್’’ ಎಂದು ಬರೆದಿರುವ ಪೋಸ್ಟರ್ ಹಿಡಿದಿರುವ ಚಿತ್ರ ವೈರಲ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಇನ್ನೊಬ್ಬ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಕೂಡ ಟ್ವೀಟ್ ಮಾಡಿ ‘‘ಐ ಡಿಡ್ ನಾಟ್ ಸ್ಕೋರ್ ಟ್ರಿಪಲ್ ಸೆಂಚುರೀಸ್, ಮೈ ಬ್ಯಾಟ್ ಡಿಡ್’’ ಎಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಲವು ಕ್ರೀಡಾಳುಗಳಾದ ಯೋಗೇಶ್ವರ್ ದತ್ತ್, ಬಬಿತಾ ಹಾಗೂ ಗೀತಾ ಫೋಗಟ್ ಈ ನಿಟ್ಟಿನಲ್ಲಿ ಸೆಹ್ವಾಗ್ ಗೆ ಬೆಂಬಲ ಕೂಡ ವ್ಯಕ್ತಪಡಿಸಿದ್ದರು.