ಹೊಸದಿಲ್ಲಿ: ವಿಜಯದಶಮಿಯ ಸಂಭ್ರಮದಂದು ಭಜರಂಗಿ ಹಾಗೂ ವಿಹಿಪಂ ಕಾರ್ಯಕರ್ತರೆನ್ನಲಾದ ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿ, ಮಾರಕಾಯುಧಗಳನ್ನು ಪ್ರದರ್ಶಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ 60ಕ್ಕು ಹೆಚ್ಚು ಕಾರ್ಯಕರ್ತರ ವಿರುದ್ಧ ಆಗ್ರಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
“60 ಮಂದಿಯಲ್ಲಿ 29 ಮಂದಿಯ ವಿವರಗಳು ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿ ಸಂಜೀವ್ ತೋಮರ್ ತಿಳಿಸಿದ್ದಾರೆ.
ಆಗ್ರಾದ ರಾಮ್ ಲೀಲಾ ಮೈದಾನದ ಸಮೀಪದ ಹನುಮಾನ್ ದೇವಸ್ಥಾನದಲ್ಲಿ ನಡೆದ ವಿಜಯದಶಮಿ ಆಚರಣೆಯ ವೇಳೆ ವಿಎಚ್ ಪಿ ಹಾಗು ಬಜರಂಗದಳ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದರು.
ಆಗ್ರಾ ಕೋಟೆ ಸಮೀಪವೇ ಗಾಳಿಯಲ್ಲಿ ಗುಂಡು ಹಾರಿಸಿರುವುದು ಗಂಭೀರ ವಿಷಯವಾಗಿದೆ. ಈ ಘಟನೆ ನಡೆದ ಬಗ್ಗೆ ನಮಗೆ ಮಾಹಿತಿ ಲಭಿಸಿದ ತಕ್ಷಣ ಮಾಹಿತಿ ಕಲೆ ಹಾಕಿದ್ದೇವೆ. ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದವರ ಹಾಗು ಗಾಳಿಯಲ್ಲಿ ಗುಂಡು ಹಾರಿಸಿದವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ರಾ ಸುಪರಿಂಟೆಂಡೆಂಟ್ ಆಪ್ ಪೊಲೀಸ್ ಅನುಪಮ್ ಸಿಂಗ್ ತಿಳಿಸಿದ್ದಾರೆ.