ಮುಂಡಗೋಡ; ಸರಕಾರದಿಂದ ಕೊಡುತ್ತಿರುವ ಸಾಮಾಜಿಕ ಭದ್ರತೆಯಡಿ ಮಾಸಿಕ ವೇತನ ಸರಕಾರದಿಂದ ಬಿಡುಗಡೆಯಾದರೂ ಕಳೆದ ಮೂರ್ನಾಲ್ಕು ತಿಂಗಳಿಂದ ಅಂಚೆ ಕಚೇರಿಯವರು ಇಲ್ಲ-ಸಲ್ಲದ ನೆಪ ಹೇಳುತ್ತಾ ೩-೪ ತಿಂಗಳ ಮಾಸಿಕ ವೇತನ ಬಟವಡೆ ಮಾಡದೇ ಇರುವುದರಿಂದ ಬೇಸತ್ತ ಸುಮಾರು ಐವತ್ತಕ್ಕೂ ಹೆಚ್ಚು ಫಲಾನುಭವಿಗಳು ಅಂಚೆ ಕಛೇರಿಯತ್ತ ಧಾವಿಸಿ ಹಣಕ್ಕಾಗಿ ಕಾಯುತ್ತಾ ಕುಳಿತ ಘಟನೆ ನಡೆದಿದೆ.
ವಿಕಲಚೇತನರ ವೇತನ,ವಿಧವಾ ವೇತನ,ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ವಯಸ್ಸಾದ ಕಡು ಬಡವರಿಗೆ, ವಿಧವೆಯರಿಗೆ ವಿವಿಧ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರ ಮಾಸಿಕ ವೇತನ ನೀಡುತ್ತಿದೆ. ವಿಧವೆಯರಿಗೆ ಹಾಗೂ ವಯಸ್ಸಾದವರಿಗೆ ಮಾಸಿಕ ಐದುನೂರ ರೂ. ಹಾಗೂ ಅಂಗವಿಕಲರಿಗೆ ಐದು ನೂರು ಮತ್ತು ೧೨ ನೂರು ರ. ವೇತನ ವಿತರಣೆ ಮಾಡುತ್ತದೆ.
ತಾಲೂಕಿನಲ್ಲಿನ ವಿವಿಧ ಯೋಜನೆಯಡಿ ಆರುಸಾವಿರಕ್ಕೂ ಹೆಚ್ಚು ಕಡು ಬಡವರು ಈ ಮಾಸಿಕ ವೇತನಗಳನ್ನು ಪಡೆಯುತ್ತಾರೆ. ಆದರೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೇತನ ಬಾರದೆ ಬಡವರು ತೊಂದರೆ ಅನುಭವಿಸುತ್ತಿದ್ದಾರೆ.ಆರಂಭದಲ್ಲಿ ವೇತನ ನೀಡುವಂತೆ ಅಂಚೆ ಇಲಾಖೆಗೆ ಹೋದರೆ ಖಜಾನೆಯವರು ವೇತನ ಬಿಡುಗಡೆ ಮಾಡಿಲ್ಲ ಎಂದು ಹೇಳಿ ಕಳುಹಿಸಿದರು. ಖಜಾನೆ ಇಲಾಖೆಗೆ ಹೋಗಿ ಕೇಳಿದರೆ. ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳುತ್ತಾರೆ ಬ್ಯಾಂಕ್ಗೆ ಹೋಗಿ ಕೇಳಿದರೆ ಜಮಾವಾಗಿಲ್ಲ ಎನ್ನುತ್ತಾರೆ. ಒಂದುತಿಂಗಳಿಗೂ ಹೆಚ್ಚು ಸಮಯ ಇದೇ ರೀತಿಯಾಗಿ ಓಡಾಡಿಸಿದ್ದು ಇದೀಗ ಮೂರುತಿಂಗಳು ಉರುಳಿದವು ಕಳೆದ ಹದಿನೈದುದಿನಗಳ ಹಿಂದೆ ಖಜಾನೆಗೆ ಕೇಳಿದರೆ ಹಣ ಬಿಡುಗಡೆ ಮಾಡಿದ್ದೇವೆ ಅಂಚೆ ಇಲಾಖೆಗೆ ಹೋಗಿ ಪಡೆದುಕೊಳ್ಳಿ ಎಂದು ಹೇಳುತ್ತಾರೆ. ಅಂಚೆ ಇಲಾಖೆಗೆ ಬಂದರೆ ಕಂಪ್ಯೂಟರ ಹಾಳಾಗಿದೆ ಎಂದು ಹತ್ತಾರು ದಿನಗಳಿಂದ ಓಡಾಡಿಸುತ್ತಿದ್ದಾರೆ. ಕೂಡಲೆ ನಮಗೆ ವೇತನ ನೀಡುವಂತೆ ವೇತನ ವಂಚಿತರು ಆಗ್ರಹಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಐವತ್ತಕ್ಕೂ ಹೆಚ್ಚು ಜನರು ಅಂಚೆ ಕಚೇರಿ ಬಳಿ ಜಮಾಯಿಸಿದ್ದರು.
ಮಂಗಳವಾರ ನಾನು ಅಂಚೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು ಕಂಪ್ಯೂಟರ ಸಮಸ್ಯೆಯಿಂದ ವಿಳಂಭವಾಗಿದ್ದು, ನಾಲ್ಕೈದು ದಿನಗಳಲ್ಲಿ ಅಂಚೆ ಇಲಾಖೆಯವರು ಎಲ್ಲರಿಗೂ ವೇತನ ವಿತರಿಸುತ್ತಾರೆ.- ತಹಸೀಲ್ದಾರ್ ಅಶೋಕ ಗುರಾಣಿ.
ಮುಂಡಗೋಡ ಉಪಖಜಾನೆಯಿಂದ ಪ್ರತಿ ತಿಂಗಳು ಸಾಮಾಜಿಕ ಭದ್ರತೆಯಡಿ ಸರಕಾರ ನೀಡುತ್ತಿರುವ ಹಣವನ್ನು ಅಂಚೆ ಇಲಾಖೆಗೆ ನಿಗದಿತ ಸಮಯದಲ್ಲಿ ತಲುಪಿಸಲಾಗಿದೆ, ಮುಂಡಗೋಡ ಅಂಚೆ ಇಲಾಖೆಯವರು ಶೀಘ್ರ ಹಣ ಬಟವಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂಚೆ ಕಛೇರಿಗೆ ಚಾವಿ ಹಾಕಿ ಪ್ರತಿಭಟಿಸಲಾಗುವುದೆಂದು ತಿಳಿಸಿದ್ದಾರೆ-
ಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಭೋವಿವಡ್ಡರ