ಕೋಲಾರ, ಮೇ 06 :ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಯವರ ಸ್ಮರಣಾರ್ಥ ಮೇ 5 ರಿಂದ 14 ರವರೆಗೆ ಆಯೋಜಿಸಿರುವ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನಟ ಯಶ್ ಶುಕ್ರವಾರ ಸಂಜೆ ಚಾಲನೆ ನೀಡಿದರು.
ಪಟ್ಟಣದ ಹೊರವಲಯದ ಅಭಿಮಾನಿ ಕೆರೆ ಅಂಗಳದಲ್ಲಿ ಜನ್ಮ ಭೂಮಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಹೊನಲು ಬೆಳಕಿನ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೋಲಾರ ಜಿಲ್ಲೆಯ ಜನರು ಶ್ರಮಿಕರು. ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದಿದ್ದರೂ ಹನಿ ನೀರಾವರಿಯ ಪದ್ಧತಿ ಅಳವಡಿಸಿಕೊಂಡು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಜನರಿಗೆ ಅನುಕೂಲವಾಗುವಂತೆ ಮಾವಿನ ಕಾಯಿಯ ತಿರುಳು ತೆಗೆಯುವ ಕಾರ್ಖಾನೆ ತೆರೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ರವರಲ್ಲಿ ಮನವಿ ಮಾಡಿದರು.
ಕ್ರೀಡೆ ಎಂದರೆ ಎಲ್ಲರಲ್ಲೂ ಉತ್ಸಾಹ. ಕ್ರಿಕೆಟ್ ಒಂದೇ ಕ್ರೀಡೆಯಲ್ಲ, ನಾವು ಎಲ್ಲಾ ಕ್ರೀಡೆಗಳಿಗೂ ಸಮಾನ ಪ್ರಾಶಸ್ತ್ಯ ನೀಡಬೇಕು. ಎಲ್ಲಾ ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಎರಡನ್ನು ಸಮಾನವಾಗಿ ಕ್ರೀಡಾ ಸ್ಫೂತಿಯಿಂದ ಸ್ವೀಕರಿಸಬೇಕು. ಕ್ರೀಡಾಪಟುಗಳೆ ನಿಜವಾದ ಹೀರೋಗಳು ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಆರ್. ರಮೇಶ್ಕುಮಾರ್ರವರು ಇಲ್ಲಿನ ಜನ ಶ್ರಮಿಕರು. ಇವರು ಹತ್ತಿರದಿಂದ ರಾಜ್ಯಮಟ್ಟದ ಪಂದ್ಯಾವಳಿ ನೋಡಿ ಆನಂದಿಸಬೇಕು ಎಂಬುದು ನನ್ನ ಕನಸು. ಯುವಕರು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಂಡು ದೇಹಕ್ಕೆ ಶ್ರಮ ನೀಡಿ ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಬೇಕು. ಸಾಂಗಿಕ ಪ್ರದರ್ಶನ ತೋರಿದರೆ ಗೆಲುವು ನಮ್ಮದಾಗುತ್ತದೆ. ಸೋಲು ಇರುವುದರಿಂದಲೆ ಗೆಲುವಿಗೆ ಬೆಲೆ. ಸೋಲು ಎಂಬುದು ಶಾಶ್ವತವಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 8 ಪುರುಷ ತಂಡಗಳು ಹಾಗೂ 4 ಮಹಿಳಾ ತಂಡಗಳು ಭಾಗವಹಿಸಿದ್ದವು.