ಕಾರವಾರ: ಪ್ರತಿವರ್ಷದಂತೆ ಈ ವರ್ಷವೂ ಸಹ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪವಿತ್ರ ಹಜ್ಯಾತ್ರೆಗೆ ಹೋಗುವ ಯಾತ್ರಿಗಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಸಾಹಿಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಕಾರವಾರದವರು ಜಿಲ್ಲಾ ಆಸ್ಪತ್ರೆಯವರ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ಹಮ್ಮಿಕೊಂಡಿದ್ದರು.
ಈ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಯ್ಯಾಮ್ ಮುಗದ್ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ಹಜ್ಯಾತ್ರಿಗಳು ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆ ನೆಲೆಸುವಂತೆ ಪ್ರಾರ್ಥಿಸಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿ ಉತ್ತರ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರೂ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ರವರು ಉಪಸ್ಥಿತರಿದ್ದರು. ಪ್ರತಿವರ್ಷಕ್ಕಿಂತಲೂ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು 173 ಉತ್ತರ ಕ್ನನಡ ಜಿಲ್ಲೆಯ ಹಜ್ಯಾತ್ರಿಗಳು ಆಗಮಿಸಿ ಚುಚ್ಚುಮದ್ದನ್ನು ಹಾಕಿಸಿಕೊಂಡರು. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳಾದ ಸಿಸ್ಟರ್ ಎಮೆಲಿನಾ ಮಿರಾಂಡಾ, ರೇಖಾ ಫರ್ನಾಂಡಿಸ್, ನೆಲ್ವಿಯಾ, ಮಂಜುಳಾ, ಬ್ರದರ್ ಶೈಲೇಂದ್ರ ರವರು ಚುಚ್ಚುಮದ್ದು ನೀಡಲು ಸಹಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಎನ್ ಫೈರೋಜ್ ಖಾನ್, ರುಕ್ಸಾನಾ ಖಾನಮ್, ಸಾಹಿಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಕಾರವಾರದ ಉಪಾಧ್ಯಕ್ಷರಾದ ಇಬ್ರಾಹಿಂ ಕಲ್ಲೂರ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಾಹಿಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಕಾರವಾರದ ಅಧ್ಯಕ್ಷರಾದ ಮೊಹಮ್ಮದ್ ಕಲೀಂ ಶೇಖ್ರವರು ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ದಾದಾ ಹಯಾತ್ ರೋಂಡ್ ರವರು ವಂದಿಸಿದರು.