ಕಾರವಾರ : ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿಯ ಅಭಿವೃದ್ಧಿ ಇಂದಿನ ಅಗತ್ಯ ಎಂದು ಕಾರವಾರ ಸಹಾಯಕ ಆಯುಕ್ತ ಅಭಿಜಿನ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಿಸಲಾದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಉದ್ಯಾನಗಳು, ಕೆರೆ ಕುಂಟೆಗಳು, ಕೃಷಿ ಭೂಮಿ, ತೋಟಗಾರಿಕೆ ಉತ್ತೇಜಿತ ಹಣ್ಣು, ತರಕಾರಿ, ಹೂದೋಟಗಳು, ಕಸುಬುಗಳಾಧಾರಿತ ಪೇಟೆಗಳು, ಮಾರುಕಟ್ಟೆಗಳು, ಸಣ್ಣ ಸಣ್ಣ ಉದ್ದಿಮೆಗಳು ಹೀಗೆ ಬೆಂಗಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸಿದ್ದಾರೆ. ಅಂತಹ ದೂರದೃಷ್ಟಿಯ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಪರಿಸರಸ್ನೇಹಿ ನಗರವಾಗಿದ್ದರಿಂದಲೇ ಉದ್ಯಾನ ನಗರಿ ಬೆಂಗಳೂರು ವಿಶ್ವ ಗಮನ ಸೆಳೆಯಿತು. ಆದರೀಗ ಬೆಂಗಳೂರು ಸೇರಿದಂತೆ ಹಲವು ನಗರಗಳು ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಮಾಲಿನ್ಯ ನಗರಗಳಾಗುತ್ತಿರುವುದು ದುರದೃಷ್ಟಕರ ಎಂದರು.
ಪ್ಲಾಸ್ಟಿಕ್ ರಕ್ಕಸಿಗೆ ಒಲವು ತೋರುತ್ತಿರುವ ಜನರ ಮನೋಭಾವದಿಂದಾಗಿ ಪರಿಸರವನ್ನು ಬಲಿ ಕೊಡಲಾಗುತ್ತಿದೆ. ಇದಕ್ಕೆ ಕಡಿವಾಣ ಅನಿವಾರ್ಯವಾಗಿದ್ದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಅದು ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಲೇಖಕಿ ಶ್ರೀದೇವಿ ಕೆರೆಮನೆ ಮಾತನಾಡಿ, ಕೆಂಪೇಗೌಡ ಅವರು ಕೇವಲ ಬೆಂಗಳೂರು ನಿರ್ಮಾತೃವಾಗದೆ ಅವರೊಬ್ಬ ಸಾಂಸ್ಕøತಿಕ ರಾಯಭಾರಿ. ಸುಂದರ, ಪರಸರ ಸ್ನೇಹಿ ನಗರವನ್ನು ನಿರ್ಮಾಣದ ಜತೆಗೆ ತಮ್ಮ ಅಡಳಿತದಲ್ಲಿ ಎಲ್ಲಾ ಧರ್ಮ, ಜನಾಂಗದ ಜನ ಸಮುದಾಯವನ್ನು ಒಟ್ಟೊಟ್ಟಿಗೇ ಅಭಿವೃದ್ಧಿಗೆ ತೊಡಗಿಸಿದರು. ಆ ಮೂಲಕವೇ ಕೆಂಪೇಗೌಡರು ಆಧುನಿಕ ಬದುಕಿನ ಶಿಲ್ಪಿಯಾದರು. ಕೃಷಿ ರೈತಾಪಿ ಜನರ ಸಾಂಸ್ಕøತಿಕ ರಾಯಭಾರಿಯಾಗಿದ್ದರು. ವಿಜಯನಗರ ಅರಸ ಸಾಮಂತರಾದರೂ ಸ್ವತಂತ್ರ್ಯ ಆಡಳಿತ ಶೈಲಿಯಿಂದ ಆಗಿನ ಇತರ ಸಾಮಂತರಿಗಿಂತಲೂ ವಿಶೇಷ ಆಡಳಿತವನ್ನು ನಡೆಸಿ ವಿಜಯನಗರ ಅರಸರಿಂದ ಶಹಭಾಸ್ ಪಡೆದಿದ್ದರು. ಅಲ್ಲದೆ ಬೆಂಗಳೂರು ನಿರ್ಮಾಣ ಸಂದರ್ಭದಲ್ಲಿ 50 ಸಾವಿರ ವರಹಗಳ ಸೇರಿದಂತೆ ವಿವಿಧ ಸಹಕಾರಗಳನ್ನು ವಿಜಯನಗರ ಅರಸು ನೀಡಿದ್ದರು. ಕೆಂಪೇಗೌಡ ಅವರು ಸೌಹಾರ್ಧಯುತ ಅಭಿವೃದ್ಧಿ ಆಡಳಿತ ಇಂದಿಗೆ ಅತ್ಯಂತ ಪ್ರಸ್ತುತ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಿಂದಿನ ವಿವಿಧ ಜಯಂತಿಗಳಲ್ಲಿ ಬಾಕಿ ಉಳಿದಿದ್ದ ಸುಮಾರು ಎರಡೂವರೆ ಲಕ್ಷ ಮೊತ್ತದಲ್ಲಿ ಕಾರವಾರ ತಾಲೂಕಿನ ವಿವಿಧ 10 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ, ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಟ ನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಟಿ.ಭಟ್ ಉಪಸ್ಥಿತರಿದ್ದರು.