ಭೋಪಾಲ್: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆ ತೆಗೆದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಮಧ್ಯಪ್ರದೇಶದ ಆರ್ಎಸ್ಎಸ್ ಮುಖಂಡ ಡಾ.ಚಂದ್ರಾವತ್ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಉಜ್ಜೈನಿಯ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಕೇರಳದಲ್ಲಿ 300ಕ್ಕೂ ಹೆಚ್ಚು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗೆ ಪಿಣರಾಯಿ ವಿಜಯನ್ ನೇರ ಹೊಣೆ. ಹೀಗಾಗಿ ಅವರ ತಲೆಯನ್ನು ತೆಗೆದವರಿಗೆ ತನ್ನ ಆಸ್ತಿಯನ್ನು ಮಾರಿ 1 ಕೋಟಿ ರೂ. ಬಹುಮಾನ ನೀಡುತ್ತೇನೆ ಎಂದು ಪ್ರಕಟಿಸಿದ್ದಾರೆ.
ಕೇರಳದಲ್ಲಿ ಸಂಘಪವಾರ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಜಗಳ ಈಗ ಹೆಚ್ಚಾಗಿದ್ದು, ಕಳೆದ ತಿಂಗಳು ಬಿಜೆಪಿ ಮುಖಂಡ ಸಂತೋಷ್ ಅವರ ಕೊಲೆಯಾಗಿತ್ತು.
ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೃಹತ್ ಕೋಮು ಸೌಹಾರ್ದ ಸಮಾವೇಶ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿ ಭಾಷಣ ಮಾಡಿದ್ದರು. ಆದ್ರೆ ಇದಕ್ಕೂ ಮೊದಲು ಸಂಘಪರಿವಾರ ಪಿಣರಾಯಿ ಆಗಮನ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಪಿಣರಾಯಿ ಮಂಗಳೂರಿಗೆ ಬರದಂತೆ ತಡೆಯಲು ಜಿಲ್ಲೆಯಾದ್ಯಂತ ಬಂದ್ಗೆ ಕರೆ ನೀಡಿದ್ದರು.
ಆದರೆ ಕಾರ್ಯಕ್ರಮದಲ್ಲಿ ಯಾವುದೇ ಅಹಿತರ ಘಟನೆ ಸಂಭವಿಸಬಾರದೆಂದು ಸರ್ಕಾರ ಮಂಗಳೂ ಕಮಿಷನರ್ ವ್ಯಾಪ್ತಿಯಲ್ಲಿ 144ಸೆಕ್ಷನ್ ಜಾರಿ ಮಾಡಿತ್ತು. ಮಾತ್ರವಲ್ಲದೇ 3 ಸಾವಿರಕ್ಕಿಂತಲೂ ಅಧಿಕ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. 600 ಸಿಸಿ ಕ್ಯಾಮೆರಾ ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.
ಕೋಮು ಸೌಹಾರ್ದ ಸಮಾವೇಶಕ್ಕೆ ರಾಜ್ಯ ಸರ್ಕಾರ ಭದ್ರತೆ ಒದಗಿಸಿದ ಹಿನ್ನೆಲೆಯಲ್ಲಿ ಕೇರಳ ಸಿಎಂ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದ ಹೇಳಿದ್ದರು.