ಶಿವಮೊಗ್ಗ:ಜನಪದರ ಬದುಕಿನ ಭಾಗವಾಗಿರುವ ಜನಪದ ಕಲೆ, ಕ್ರೀಡೆಗಳು ಮನೋರಂಜನೆ ನೀಡುವುದರ ಜೊತೆಗೆ ಮನೋಸ್ಥೈರ್ಯವನ್ನು ಹೆಚ್ಚಿಸಲಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಜಯಂತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜನಪದದ ಅರ್ಥ ಮತ್ತು ವ್ಯಾಪ್ತಿ ಸೀಮಿತವಾಗಿಲ್ಲ. ಇವುಗಳು ಎಲ್ಲರ ಮನ ತಣಿಸುವ, ಮುದ ನೀಡುವುದಲ್ಲದೇ ಎಲ್ಲರನ್ನೂ ಒಳಗೊಳ್ಳುವ ವಿಶಿಷ್ಟ ಕಲೆ ಹೊಂದಿವೆ. ಇಡೀ ಸಮುದಾಯವನ್ನು ಸಮ್ಮೋಹನಕ್ಕೆ ಒಳಪಡಿಸುವ ಮಾಂತ್ರಿಕ ಶಕ್ತಿ ಹೊಂದಿವೆ ಎಂದರು.
ವೈಜ್ಞಾನಿಕವಾಗಿ ಅನೇಕ ಕ್ಷೇತ್ರಗಳಲ್ಲಿ ಮುಂದುವರೆದಿದ್ದಾಗ್ಯೂ ವಿಜ್ಞಾನ ಮತ್ತು ತಂತ್ರಜ್ಞಾನದ ವಿಕಾಸದ ಕುರಿತಾದ ಚಿಂತನೆಗೆ ಜನಪದ ಪ್ರಕಾರಗಳು ಅಡಿಪಾಯವೆನಿಸಿವೆ ಎಂದ ಅವರು ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳಿಗೆ ಇದೊಂದು ಸ್ಮರಣೀಯವಾದ ಗಾಂಧೀ ಕಲ್ಪನೆಯ ಗ್ರಾಮಸ್ವರಾಜ್ಯ ಹಾಗೂ ಗ್ರಾಮೀಣ ಜನರ ಜೀವನ ವಿಧಾನವನ್ನು ಪರಿಚಯಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದವರು ನುಡಿದರು.
ಪರಸ್ಪರ ಸಹಬಾಳ್ವೆ, ಸಹಕಾರ ಮನೋಭಾವ, ಸ್ನೇಹ-ಸೌಹಾರ್ಧ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಈ ಶಿಬಿರ ಸಾರಲಿದೆ ಎಂದರು.
ಇದೇ ಸಂದರ್ಭದಲ್ಲಿ ಭದ್ರಾವತಿಯ ಚೌಟಿಕೆ ಕಲಾವಿದ ಹನುಮಂತಪ್ಪ ಮತ್ತು ಸಂಗಡಿಗರಿಂದ ಚೌಡಿಕೆ ಪದಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಶಿಬಿರಾರ್ಥಿಗಳಿಗಾಗಿ ಲಗೋರಿ, ಹಗ್ಗ-ಜಗ್ಗಾಟ, ಮ್ಯೂಸಿಕಲ್ ಚೇರ್ ಮುಂತಾದ ಜನಪದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿದರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಯಣ್ಣ, ಉಪಾಧ್ಯಕ್ಷ ಸುರೇಶ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.