ದಾವಣಗೆರೆ ಜುಲೈ 19. ಶಿವಾಗಮಗಳಲ್ಲಿ ವೀರಶೈವ ಧರ್ಮದ ಮೂಲ ಬೇರುಗಳಿವೆ. ಈ ಧರ್ಮದ ದಾರ್ಶನಿಕತೆ ಎಲ್ಲ ಧsರ್ಮಗಳಿಗೆ ತಾಯಿ ಬೇರು. ಮನುಷ್ಯನ ವ್ಯಕ್ತಿತ್ವ ವಿಕಸನವೇ ವೀರಶೈವ ಧರ್ಮದ ಪರಮ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಜರುಗುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 2ನೇ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕøಷ್ಟ ಸಂಸ್ಕøತಿ ನಾಶ ಮಾಡುವ ಸಂಚು ನಡೆಯುತ್ತಿದೆ. ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ದೇಶ ಉಳಿದರೆ ಧರ್ಮ ಸಂಸ್ಕøತಿ ಉಳಿದು ಬೆಳೆದು ಬರಲು ಸಾಧ್ಯ. ದೇವರ ಮೇಲಿನ ನಂಬಿಕೆ ಬಾಳಿಗೆ ಶಾಶ್ವತ ಆಶಾದೀಪ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಮಾನವ ಪರಿಪೂರ್ಣದೆಡೆಗೆ ಪಯಣ ಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ ಮತ್ತು ಧ್ಯಾನ ಎಂಬ ದಶಸೂತ್ರಗಳು ಎಲ್ಲರ ಬಾಳಿಗೆ ದಾರಿದೀಪ. ಕಾಯಕ ಮತ್ತು ದಾಸೋಹದ ಮೂಲಕ ಭಾವೈಕ್ಯತೆ ಸಾಮರಸ್ಯ ಬೆಳೆಸಲು ಪ್ರಯತ್ನಿಸಿದೆ ಎಂದರು.
‘ಕಾಯಕ ಯೋಗಿ’ ಗೌರವ ಪ್ರಶಸ್ತಿಯನ್ನು ಮಾಜಿ ಪುರಸಭಾ ಅಧ್ಯಕ್ಷ ಬಿ. ವೀರಣ್ಣ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು.
ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಕುಪ್ಪೂರು ಗದ್ದಿಗೆ ಮಠದ ಡಾ|| ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮದ ಇತಿಹಾಸ ಮತ್ತು ಪಂಚಪೀಠಗಳ ಉನ್ನತ ಪರಂಪರೆಯ ಬಗೆಗೆ ಉಪದೇಶಾಮೃತವನ್ನಿತ್ತರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಉಜ್ವಲ ಭವಿಷ್ಯಕ್ಕೆ ಧರ್ಮ ಮತ್ತು ಗುರುವಿನ ಪಾತ್ರ ಬಲು ದೊಡ್ಡದೆಂದರು.
ಮಾಜಿ ಶಾಸಕ ಬಿ.ಪಿ. ಹರೀಶ, ಎನ್.ಜಿ. ಪುಟ್ಟಸ್ವಾಮಿ, ಹೆಚ್.ಎಸ್.ನಾಗರಾಜ್, ಅಣಬೇರು ಜೀವನಮೂರ್ತಿ, ಹೆಚ್.ಕೆ. ಬಸವರಾಜ, ಡಿ.ಎಂ.ಹಾಲಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು. ಮಲ್ಲಿಕಾರ್ಜುನ ಬದಾಮಿ ಸ್ವಾಗತಿಸಿದರು. ಐನಹಳ್ಳಿ ವಸಂತಕುಮಾರಿ ನಿರೂಪಣೆ ಮಾಡಿದರು.
ಇಷ್ಟಲಿಂಗ ಮಹಾಪೂಜಾ: ಲೋಕಕಲ್ಯಾಣ ಮತ್ತು ಶಾಂತಿ ಸಮೃದ್ಧಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದ ದೃಶ್ಯ ಅಪೂರ್ವವಾಗಿತ್ತು.